Thursday, May 22, 2014

ಹಿಮಶಿಖರಗಳ ನಡುವೆ ಒಬ್ಬ ಅಲೌಕಿಕ ಸಾಧಕಿ -ಜೆಟ್ ಸುಮ್ನಾ ತೆನ್ಜಿನ್ ಪಾಲ್ ಮೋ


ಹಿಮಶಿಖರಗಳ ನಡುವೆ ಒಬ್ಬ ಅಲೌಕಿಕ ಸಾಧಕಿ -ಜೆಟ್ ಸುಮ್ನಾ ತೆನ್ಜಿನ್ ಪಾಲ್ ಮೋ



ತೆನ್ಜಿನ್ ಪಾಲ್ ಮೋ. ದಿಲ್ಲಿಯಿಂದ ಧರ್ಮಶಾಲಾ ಗೆ  ಕಿಂಗ್ಫಿಶರ್ ವಿಮಾನ ಟೇಕಾಫ಼್ ಆದಾಗಲೂ  ನಾನು ಅವಳ ಹೆಸರು ಕೇಳಿರಲಿಲ್ಲ.ಧರ್ಮಶಾಲಾ, ಸುತ್ತಮುತ್ತಲಿನ ಕಾಂಗ್ರಾ ಕಣಿವೆ ತಿರುಗಾಟಕ್ಕೆಂದು ಹತ್ತು ದಿನಗಳ ಕಾರ್ಯಕ್ರಮ ಹಾಕಿಕೊಂಡು ಹೊರಟಿದ್ದೆವು. ಆ ಸ್ಥಳಗಳ ಬಗ್ಗೆ ಅದಷ್ಟೂ ಓದಿ ತಯಾರಿಯನ್ನೂ ಮಾಡಿಕೊಂದಿದ್ದೆವು. ೫ ದಿನ ಮೆಕ್ಲಾಯ್ಡ್ ಗಂಜ್ ನಲ್ಲಿ ಇರುವುದೆಂದು ಪ್ಲ್ಯಾನು ಮಾಡಿದ್ದೆವು.ಆದರೆ ಮೆಕ್ಲಾಯ್ಡ್ಗಂಜ್ ಹತ್ತಿರದಲ್ಲೇ ಜಗತ್ಪ್ರಸಿದ್ಧ ಸಂಸ್ಥೆ ಕಟ್ಟಿದ್ದ  ತೆನ್ಜಿನ್ ಪಾಲ್ ಮೋ  ಎಂಬ ಅಪೂರ್ವ ಹೆಣ್ಣಿನ ಹೆಸರೇ ನನ್ನ ಕಣ್ತಪ್ಪಿ ಹೋಗಿತ್ತು. ಅವಳ ಬಗ್ಗೆ ಕೇಳಿದ್ದು  ಭೂಮಿಯಿಂದ  ಸಾವಿರಾರು ಅಡಿಗಳೆತ್ತರದಲ್ಲಿ ತೇಲುತ್ತಾ ಒಂದು ಕಡೆ ಸಾಲುಸಾಲಾಗಿ ನಿಂತ ಹಿಮ ಪರ್ವತಗಳ  ಸೊಬಗು ನೋಡಿ ಆನಂದಿಸುತ್ತಿದ್ದಾಗ.  ಅವಳನ್ನು ಕಂಡ ಮೇಲೆ ಅದೂ ಒಂದು ರೀತಿ ಸರಿಯೇ ಎನ್ನಿಸುತ್ತಿದೆ. ಅವಳು ಈ ಭೂಮಿಗೆ ಸೇರಿದವಳೇ ಅಲ್ಲವೇನೋ ಅನ್ನಿಸುತ್ತದೆ.

ವಿಮಾನದಲ್ಲಿ ನನ್ನ ಪಕ್ಕದಲ್ಲಿ ಕುಳಿತದ್ದ ಹೆಣ್ಣಿನ ಪರಿಚಯ ಪ್ರಯಾಣದ ನಡುವೆ ಆಯಿತು. ಸುಮಾರು ನಲವತ್ತು ವಯಸ್ಸಿನ  ಅವಳು ಸ್ವಿಟ್ಜರ್ಲ್ಯಾಂಡ್ ನಿಂದ ಬಂದಿದ್ದಳು. ಹೆಸರು ಮರಿಯಾ. ದಲೈಲಾಮಾ ಅವರ ಆಶ್ರಮ ದಲ್ಲಿ ಒಂದು ವಾರ ಧ್ಯಾನ ಮಾಡಲು ಬಂದಿರುವುದಾಗಿ ಹೇಳಿದಳು. ಅದೃಷ್ಟವಶಾತ್ ತಾಶಿ ಜೋಂಗ್ ನಲ್ಲಿ ಆಗ ಇದ್ದ ತೆನ್ಜಿನ್ ಪಾಲ್ ಮೋ ಅವರನ್ನೂ ಭೇಟಿಯಾಗಲು ಪ್ರಯತ್ನ ಪಡುವುದಾಗಿ ಹೇಳಿದಳು. ಅವಳು ಯಾರೆಂಬ ಪ್ರಶ್ನೆಗೆ ಅಚ್ಚರಿಯಿಂದ  ನಿಮಗೆ ಗೊತ್ತಿಲ್ವಾ, ಹುಟ್ಟಿನಿಂದ ಅವಳೊಬ್ಬ ಬ್ರಿಟಿಶರ್. ಚಿಕ್ಕ ವಯಸ್ಸಿನಲ್ಲೇ ಬೌಧ್ಧ ಧರ್ಮಕ್ಕೆ ಮಾರು ಹೋಗಿ ಭಾರತಕ್ಕೆ ಬಂದವಳು. ೧೨ ವರ್ಷ ಹಿಮಾಲಯz ನಿರ್ಜನ ಪರ್ವತದ   ಹಿಮತುಂಬಿದ ಗುಹೆಯೊಂದರಲ್ಲಿ ಒಬ್ಬಳೇ ತಪಸ್ಸು ಮಾಡಿ ದವಳು. ತಾಶಿ ಜೋಂಗ್ ಹತ್ತಿರವಿರುವ ಸನ್ಯಾಸಿನಿಯರ ಆಶ್ರಮವನ್ನು ಕಟ್ಟಿದವಳೂ ಅವಳೇ! ಅವಕಾಶ ಸಿಕ್ಕರೆ ಖಂಡಿತ ನೋಡಿ ಬನ್ನಿ॒ ಎಂದು ವಿವರಿಸಿದಳು.

ಆ ಕ್ಷಣದಿಂದ ತೆನ್ಜಿನ್ ಪಾಲ್ ಮೋ ನನ್ನನ್ನು ಕಾಡತೊದಗಿದಳು. ಒಬ್ಬ ೧೮ ವರ್ಷದ ಬ್ರಿಟಿಶ್ ಹುಡುಗಿಗೆ ತಂದೆ ತಾಯಿ ಕುಟುಂಬ  ತೊರೆದು,  ಸ್ಕೂಲು ಕಾಲೇಜುಗಳನ್ನು ತೊರೆದು, ರಾಕ್ ಮ್ಯೂಜಿಕ್ ಸಿನೆಮಾಗಳನ್ನು ತೊರೆದು,  ಗೆಳೆಯ ಗೆಳತಿಯರೆಂಬ ವಯೋಸಹಜ ಆಕರ್ಷಣೆಗಳನ್ನು ತೊರೆದು, ಬೆಚ್ಚನೆಯ ’ ಫ಼ರ್ಸ್ಟ್ ವರ್ಲ್ಡ್’ ಬದುಕನ್ನು ತೊರೆದು  ದೂರದ  ಹಿಮಾಲಯದ ಪರ್ವತಗಳ ನಡುವೆ ಅಪರಿಚಿತ ಧರ್ಮದ  ಕಠಿಣ ಸಾಧನೆ ಮಾಡುವ ಸೆಳೆತ ಹೇಗೆ ಬಂತು?

ಲಂಡನ್ನಿನಲ್ಲಿ ಹುಟ್ಟಿದ ಅವಳ ಪೂರ್ವಾಶ್ರಮದ ಹೆಸರು ಡಯಾನೆ ಪೆರ್ರಿ ಎಂದು. ಅಪ್ಪ ಹೊಟ್ಟೆ ಹೊರೆಯಲು ಮೀನು ಮಾರುತ್ತಿದ್ದ.  ಮನೆಯಲ್ಲಿ ಆಧ್ಯಾ ತ್ಮಿಕತೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ, ಅವಳಿಗೆ ತಾನೊಬ್ಬ ಬೌಧ್ಧ ಧರ್ಮದವಳೆಂದು ಅನ್ನಿಸಿದ್ದು ಅದರ ಬಗ್ಗೆ ಒಂದು ಪುಸ್ತಕ ಓದಿದಾಗ. ಅದರ ಪgಣಾಮ- ೨೦ ವರ್ಷ ವಯಸ್ಸಿನವಳಿದ್ದ್ದಾಗ ಭಾರತಕ್ಕೆ ಬಂದು ಧರ್ಮಗುರು ೮ನೇ ಖಮ್ತ್ರುಲ್ ರಿಂಪೋಚೆ ಯವರ ಶಿಶ್ಯಳಾಗಿ  ಟಿಬೆಟನ್ ಬೌಧ್ಧಧರ್ಮದ ಬಗ್ಗೆ ನಿರಂತರ ಅಭ್ಯಾಸ ಮಾಡಿ, ೧೯೬೪ ರಲ್ಲಿ ಅದರಲ್ಲಿ ಉನ್ನತ ’ಶ್ರಮನೆರಿಕಾ’ ದೀಕ್ಷೆ ಪಡೆದ ಮೊದಲ ಪಾಶ್ಚಾತ್ಯ ಮಹಿಳೆಯಾದಳು.

ಭಿಕ್ಷುಣಿ ಯರ ಪರಂಪರೆಯೇ  ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಖಮ್ತ್ರುಲ್ ರಿಂಪೊಚೆಯ ಆಶ್ರಮದಲ್ಲಿ ೧೦೦ ಸನ್ಯಾಸಿ ಗಳ ನಡುವೆ ಇವಳೊಬ್ಬಳೇ  ಸನ್ಯಾಸಿನಿ.
ಆಗ ಅವಳಿಗಾದ ಅನುಭವ ಅವಳ ಬದುಕಿಗೆ ಹೊಸ ತಿರುವು ಕೊಟ್ಟಿತು. ಎಲ್ಲ ರೀತಿಯಲ್ಲೂ ಅವರಿಗೆ ಸರಿಸಮಳಾಗಿದ್ದರೂ ಗಂಡಸರಿಗೆ ಸುಲಭವಾಗಿ ಸಿಗುತ್ತಿದ್ದ ಹೆಚ್ಚಿನ ಜ್ನಾನ ಹೆಣ್ಣಾಗಿದ್ದರಿಂದ ಇವಳ ಕೈಯ್ಯಿಗೆ ಎಟುಕದಾಯಿತು.  ಹೆಣ್ಣೆಂಬ ಒಂದೇ ಕಾರಣದಿಂದ ಆಶ್ರಮದ ಹಲವಾರು  ಮುಖ್ಯ ಆಧ್ಯಾತ್ಮಿಕ ಚಟುವಟಿಕೆಗಳಿಂದ ಇವಳನ್ನು ಹೊರಗಿಡಲಾಯಿತು. ಇಲ್ಲೇ ಇದ್ದರೆ ತನ್ನ ಮುನ್ನಡೆ ಅಸಾಧ್ಯ ವೆಂಬ ಅರಿವು ಆಗತೊಡಗಿತು. ಇಲ್ಲಿ ಟಿಬೆಟನ್ ಸನ್ಯಾಸಿನಿಯgಗೆ ಶ್ರಮನೇರಿಕಾ ಮಟ್ಟದಿಂದ ಮೇಲೇರುವುದು , ಪೂರ್ಣ ಪ್ರಮಾಣದ ಭಿಕ್ಷುಣಿಯರಾಗುವುದು ಸಾಧ್ಯವಿರಲಿಲ್ಲ.  ಹೀಗೆ ಆರು ವರ್ಷ ಕಳೆದ ತೆನ್ಜಿನ್ ಅವಳ ಗುರುವಿನ ಬುಧ್ಧಿವಾದದ ಮೇರೆ ಆ ಆಶ್ರಮ ತೊರೆದು ಹಾಂಕಾಂಗ್ ತಲುಪಿ, ಅಲ್ಲಿ ೧೯೭೩ ರಲ್ಲಿ ಪೂರ್ಣ ಪ್ರಮಾಣದ ಭಿಕ್ಷುಣಿ ದೀಕ್ಶೆ ಪಡೆದಳು. ನಂತರ ಟಿಬೆಟ್- ಹಿಮಾಚಲ ಪ್ರದೇಶದ ಗಡಿಯಲ್ಲಿರುವ  ಲಹೌಲ್ ತಲುಪಿದಳು. ಆಧ್ಯಾತ್ಮಿಕ ಪರಿಪೂರ್ಣತೆ ಪಡೆಯುವ ಜಾqನಲ್ಲಿ  ನಿರಂತರ ಧ್ಯಾನ ಸಾಧನೆಗಳ ಆಳಕ್ಕೆ ಇಳಿಯಲು ೧೩,೨೦೦ ಅಡಿ ಎತ್ತರದ  ಪ್ರದೇಶದಲ್ಲಿ  ಒಂದು ನಿರ್ಜನ  ಗುಹೆ ಹೊಕ್ಕಳು.

ಅವಳು ಆಲ್ಲಿ ಬದುಕಿದ ರೀತಿ ನೋಡಿದರೆ ಮೈ ಜುಂ ಎನ್ನುತ್ತದೆ. ೧೦ ಅಡಿ ಅಗಲ ಮತ್ತು ಆರಡಿ ಆಳವಿದ್ದ ಆ ಗುಹೆಯಲ್ಲಿ  ಅವಳು ೧೯೭೬ ರಿಂದ ವಾಸಮಾಡತೊಡಗಿದಳು. ಹನ್ನೆರಡು ವರ್ಷಗಳು ಅಲ್ಲಿ ಕಳೆದಳು. ಮೂರು  ವರ್ಷಗಳಂತೂ ಯಾವ ಬಾಹ್ಯ ಸಂಪರ್ಕವೂ ಇಲ್ಲದೆ ಸಾಧನೆ ಮಾಡಿದಳು. ತನ್ನ ಆಹಾರ ತಾನೇ ಬೆಳೆದು ಕೊಳ್ಳುತ್ತಾ, ಪುರಾತನ ಬೌಧ್ಧ ಧರ್ಮದ ಶೈಲಿಯಲ್ಲಿ ಆಳವಾಗಿ ಧ್ಯಾನ ಮಾಡಿದಳು. ವರ್ಶದಲ್ಲಿ ಆರರಿಂದ ಎಂಟು ತಿಂಗಳು  ಕವಿದಿರುವ ಹಿಮ,  ಕಾಡು ಪ್ರಾಣಿಗಳ ಭಯ, ಅಪ್ಪಳಿಸುವ ಚಂಡಮಾರುತಗಳು,  ಕಾಡುವ ಹಸಿವು ನೀರಡಿಕೆ, ಚಳಿಗಾಲದಲ್ಲಿ -೩೫ ಡಿಗ್ರಿ ಮುಟ್ಟುವ ತಾಪಮಾನ ಎಲ್ಲವನ್ನೂ ಎದುರಿಸಿ ತನ್ನ ತಪಸ್ಸನ್ನು ಮುಂದುವರಿಸಿದಳು. ಅವಳು ಪಾಲಿಸುತ್ತಿದ್ದ ಬೌಧ್ಧ ಧರ್ಮದ ಕಟ್ಟಳೆಗಳ ಪ್ರಕಾರ  ಮೂರು ವರ್ಷಗಳ ಕಾಲ ಅವಳೆಂದೂ ಅಡ್ಡಾಗುವ ಹಾಗಿರಲಿಲ್ಲ . ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದ್ದಂತೆ . ದಿನಾ ರಾತ್ರಿ ಮೂರು ಗಂಟೆ ಕಾಲ  ಒಂದು ಮೂರು ಅಡಿ ಉದ್ದ, ಮೂರು ಅಡಿ ಅಗಲದ   ಮರದ ಧ್ಯಾನದ ಪೆಟ್ಟಿಗೆಯಲ್ಲಿ ಕುಳಿತೇ ನಿದ್ರಿಸಬೇಕಾಗಿತ್ತು! ಆದರೆ ಅವಳ ಗುರಿ ನಿಚ್ಚಳವಾಗಿತ್ತು. ತಾನು  ಹೆಣ್ಣಿನ ದೇಹದಲ್ಲಿದ್ದು ಕೊಂಡೇ ’ಜ್ನಾನೋದಯ’ ಪಡೆಯುವುದಾಗಿತ್ತು.

ಅವಳೇ ಹೇಳುವಂತೆ’ ಮೊದಲು ಭಾರತಕ್ಕೆ ಅಧ್ಯಯನಕ್ಕಾಗಿ ಬಂದಾಗ ೧೦೦ ಜನ ಸನ್ಯಾಸಿಗಳ ನಡುವೆ ಇದ್ದವಳು ನಾನೊಬ್ಬಳೇ ಹೆಂಗಸು. ನನಗನ್ನಿಸೋದು ಅ  ಕ್ಷಣದಲ್ಲೇ  ನಾನೊಬ್ಬಳೇ ಗುಹೆಯಲ್ಲಿ ಬದುಕುವ  ನಿರ್ಧಾರ ನನ್ನಲ್ಲಿ ಮೂಡಿರಬೇಕು. ನನ್ನ ಜೊತೆ ಇದ್ದ ಸನ್ಯಾಸಿಗಳು ಒಳ್ಳೆಯವರೇ ಇದ್ದರು, ಸ್ನೇಹಪರರಾಗಿದ್ದರು, ಎಂದೂ ನನಗೆ ಲೈಂಗಿಕ ಶೋಷಣೆಯಂಥಾ ಸಮಸ್ಯೆಗಳನ್ನು ಎದುರಿಸಬೇಕಾಗಿರಲಿಲ್ಲ.  ಅವರ ಪ್ರಕಾರ, ನನ್ನ ದುರದೃಷ್ಟವೆಂದರೆ ನಾನು ಹೆಣ್ಣಿನ ಶರೀರದಲ್ಲಿ ಬಂದಿಯಾಗಿದ್ದೆ. ನೀನು ಮುಂದಿನ ಜನ್ಮದಲ್ಲಾದರೂ ಗಂಡಾಗಿ ಜನ್ಮ ತಾಳಿ ನಮ್ಮೆಲ್ಲ ರೊಡನೆ ಆಶ್ರಮದ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ನಾವೆಲ್ಲ ದಿನಾ ನಿನಗಾಗಿ ಪ್ರಾರ್ಥಿಸುತ್ತೇವೆ! ಎಂದೂ ಹೇಳಿದ್ದರು. ಪಾಪ, ಇವಳು ಹೆಣ್ಣಾಗಿ ಜನ್ಮ ತಾಳಿ ನಮಗಿಂತ ಕೀಳಾದಳಲ್ಲಾ ಎಂದು ಅವರಿಗೆ ಒಂದು ರೀತಿ ಕರುಣೆ. ಆದರೆ ಅದರಲ್ಲಿ ನನ್ನ ತಪ್ಪೇನೂ ಇಲ್ಲ ಎಂಬ ನಂಬಿಕೆ ಕೂಡಾ! ಆದರೆ, ನಾನು ಮನಸ್ಸು ಮಾಡಿ ಆಗಿತ್ತು, ಎಷ್ಟೇ ಜನ್ಮಗಳು ತಾಳಿದರೂ ಪರವಾಗಿಲ್ಲ, ನಾನ್ ಹೆಣ್ಣಾಗಿಯೇ ಜ್ನಾನೋದಯ ಪಡೆಯುತ್ತೇನೆಂದು!  ಮುಖ್ಯವಾಗಿ, ಗೌತಮ ಬುದ್ಧನೇ ಹೇಳಿರುವಂತೆ ಬೌದ್ಧ ಸನ್ಯಾಸಿನಿಯರ್ ಪೂರ್ಣ ಪ್ರಮಾಣದ ಭಿಕ್ಶುಣಿಯರಾಗಲು ಯವ ತಡೆಯೂ ಇರಲಿಲ್ಲ. ಅವನೆಲ್ಲೂ ಇವರು ಕೇವಲ ಮೊದಲ ಮಟ್ಟದ ’ಶ್ರಮನೇರಿಕಾ’ ದೀಕ್ಷೆಗೆ ಮಾತ್ರ ಅರ್ಹರೆಂದು ಹೇಳಿರಲಿಲ್ಲ.  ಹಾಗಾಗಿ ನಾನು ಬುದ್ಧನ ಉದ್ದೇಶವನ್ನು ಪಾಲಿಸುತ್ತಿದ್ದೇನೆಂಬುದರ ಬಗ್ಗೆ ನನಗೆ ಯಾವ ಅನುಮಾನುವೂ ಇರಲಿಲ್ಲ.’

೧೯೮೮ ರಲ್ಲಿ ತಮ್ಮ ೧೨ ವರ್ಷಗಳ ಏಕಾಂತದಿಂದ ಹೊರಬಂದ ತೆನ್ಜಿನ್ ಪಾಲ್ ಮೋ ಹೊಸ ಬೆಳಕಿನ ದಾರಿ ಹಿಡಿದರು. ಜಗತ್ತೆಲ್ಲಾ ಸುತ್ತುತ್ತಾ, ಬೌದ್ದ್ಧಧರ್ಮದ ಬಗ್ಗೆ ಅರಿವು ಮೂಡಿಸುತ್ತಾ, ಆಧ್ಯಾತ್ಮಿಕ ಒಲವುಳ್ಳ ಹೆಣ್ಣುಮಕ್ಕಳಿಗೆ  ಶಿಕ್ಶಣ, ತರಪೇತಿ, ಪರಿಪೂರ್ಣತೆಯ ದಾರಿ ತೋರುತ್ತಾ, ಬೌದ್ಧ ಸನ್ಯಾಸಿನಿಯರಿಗೆ ಸರಿಸಮ ಹಕ್ಕುಗಳಿಗಾಗಿ ಹೋರಾಡುತ್ತಾ, ತಮ್ಮ ಕನಸಿನ ಕೂಸಾಗಿದ್ದ ಆಶ್ರಮ ಕಟ್ಟಲು ಹಣ ಕೂಡಿಸುತ್ತಾ ಸಾವಿರಾರು ಮೈಲಿ ಸುತ್ತಿದರು. ಕೊನೆಗೆ ಹಿಮಾಚಲ ಪ್ರದೇಶದಲ್ಲಿ  ಸನ್ಯಾಸಿನಿಯರಿಗಾಗಿ ಡೊಂಗ್ಯು ಘ್ಯಾಟ್ಸಾಲ್ ಲಿಂಗ್ ಆಶ್ರಮ
ಕಟ್ಟಿದರು. ಇದು ತನ್ನ ಸೋದರ ಸಂಸ್ಥೆಯಾದ ಜಗದ್ವಿಖ್ಯಾತ ತಾಶಿ ಜೋಂಗ್ ಆಶ್ರಮ ದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತದೆ. ಇಂದು ಸುಮಾರು ೧೦೦ ಸನ್ಯಾಸಿನಿಯರನ್ನು ಹೊಂದಿರುವ ಈ ಸಂಸ್ಥೆ ಬೌದ್ಧ ಧರ್ಮ, ಧ್ಯಾನ, ಸಾಧನೆಗಳ ಜೊತೆಗೆ ಹೆಣ್ಣು ಮಕ್ಕಳು ಆರ್ಥಿಕ ವಾಗಿ ಸ್ವತಂತ್ರರಾಗಿರಲು ಕುಶಲ ಕಲೆಗಳನ್ನು ಕಲಿಸುತ್ತದೆ.  ಹಳ್ಳಿ ಮಕ್ಕಳಿಗೆ ಶಾಲೆಗಳನ್ನೂ, ಅಲ್ಲಿನ ಜನರಿಗಾಗಿ ಔಷಧಾಲಯಗಳನೂ ನಡೆಸುತ್ತಿದೆ.

ಇದೆಲ್ಲಾ ಮಾಡುವ ಮೂಲಕ ಸನ್ಯಾಸಿನಿಯರ ಬಗ್ಗೆ ಸಮಾಜದಲ್ಲಿ ಇರುವ ಸಾಧಾರಣ ನಂಬಿಕೆಗಳನ್ನು ತೆನ್ಜಿನ್ ಪಾಲ್ ಮೋ  ತೊಡೆದು ಹಾಕಿದ್ದಾರೆ. ಯಾವುದೋ ಕಾರಣದಿಂದ ನೊಂದು ಬದುಕಿಗೆ ಬೆನ್ನು ತಿರುಗಿಸಿದ ಹೆಣ್ಣು ಮಕ್ಕಳು ಮಾತ್ರ ಸನ್ಯಾಸದ ಹಾದಿ ಹಿಡಿಯ ಬೇಕಿಲ್ಲ,ಪ್ರತಿ ಹೆಣ್ಣಿಗೆ ಈ ಒಂದು ಆಯ್ಕೆಯೂ ಇದೆ. ಅವಳ ಒಲವು ತನ್ನ ಬದುಕಿನಲ್ಲಿ ಆಧ್ಯಾತ್ಮಿಕ ಪರಿಪೂರ್ಣತೆ ಪಡೆಯುವುದೇ ಆಗಿದ್ದರೆ, ಮುಖ್ಯ ವಾಹಿನಿಯಿಂದ ಹೊರಹೋಗದೆಯೇ ಅದನ್ನು ಪಡೆಯುವ ಪೂರ್ಣ ಸ್ವಾತಂತ್ರ್ಯ  ಅವಳಿಗೆ ಇದೆ, ಅದಕ್ಕೆ ದಾರಿಯೂ ಇದೆ ಎಂಬುದನ್ನು ಸಾರಿ ತೋರಿಸಿದ್ದಾರೆ.

ಧರ್ಮಶಾಲಾ ದಿಂದ  ಸುಮಾರು ಒಂದು ಗಂಟೆ ಕಾಲ ಕಾರಿನಲ್ಲಿ ಪ್ರಯಾಣಮಾಡಿ ತಾಶಿ ಜೋಂಗ್ ತಲುಪಿದೆ. ೧೯೫೮ ರಲ್ಲಿಧರ್ಮಗುರು  ೮ನೆಯ ಖಮ್ತ್ರುಲ್ ರಿಂಪೋಚೆ ಕಮ್ಮುನಿಸ್ಟರ ದಾಳಿಗೆ ಹೆದರಿ ಪುರಾತನ ಪವಿತ್ರ ಹಸ್ತಪ್ರತಿಗಳನ್ನೆತ್ತಿಕೊಂಡು  ಒಂದಷ್ಟು ಸನ್ಯಾಸಿಗಳು ಮತ್ತು ಲಾಮಾಗಳೊಂದಿಗೆ ಭಾರತಕ್ಕೆ ಓಡಿ ಬಂದರಂತೆ. ಮೊದಲ ಕೆಲವು ವರ್ಷಗಳು ಕಲಿಂಪಾಂಗ್ ನಲ್ಲಿ ಕಳೆದು ೧೯೬೯ ರಲ್ಲಿ ಹಿಮಾಚಲ ಪ್ರದೇಶಕ್ಕೆ  ಬಂದರಂತೆ. ಅಲ್ಲಿ ಅವರು ತುಂಬಾ ಪವಿತ್ರವೆಂದೂ,’ಐದು ಮಂಜುಶ್ರೀ ಗಳ ಭೂಮಿ’ಯೆಂದೂ ಕಂಡುಕೊಂಡ  ೩೭ ಎಕರೆಗಳ ಸ್ಥಳದಲ್ಲಿ ’ತಾಶಿ ಜೋಂಗ್’ ಆಶ್ರಮವನ್ನು ಸ್ಥಾಪಿಸಿದರು. ಈ ಟಿಬೆmನ್ ಪದಗಳ ಅರ್ಥ ’ಪವಿತ್ರ ಕಣಿವೆ’ ಎಂದು.(ನಂತರ ಪುರಾತತ್ವ ಇಲಾಖೆಯವರು ಉತ್ಖನನ ಮಾಡಿದಾಗ ಪಳೆಯುಳಿಕೆಗಳು ಸಿಕ್ಕಿಸಾವಿರಾರು ವರ್ಷದ ಹಿಂದೆ ಇಲ್ಲಿ ಬೌಧ್ಧ ವಿಹಾರವೊಂದಿತ್ತೆಂದು ತಿಳಿದಿ ಬಂದಿದೆ.) ಇಲ್ಲಿಂದ ಸ್ವಲ್ಪ ದೂರದಲ್ಲೇ ಸನ್ಯಾಸಿನಿಯರಿಗಾಗಿ ತೆನ್ಜಿನ್ ಪಾಲ್ ಮೋ ಕಟ್ಟಿದ ಆಶ್ರಮ ’ ಡೊಂಗ್ಯು ಗ್ಯಾಟ್ಸಾಲ್ ಲಿಂಗ್ ನನರಿ ’ ಇದೆ.

ನಾನು ಅಲ್ಲಿ ತಲುಪಿದಾಗ ಮಧ್ಯಾಹ್ನದ ಹೊತ್ತು.  ಫಳಿಚ್ಚೆಂದು ಬಿಸಿಲು, ಜತೆಗೇ ಚುಮುಚುಮು ಚಳಿ. ಬಾಗಿಲು ಮುಚ್ಚಿದ್ದ ಮಂದಿರದ ಕಟೆಕಟೆ ಗಂದಲೇ ಮೌನ ಬುಧ್ಧನ ದರ್ಶನ ಮಾಡಿಕೊಂಡು  ಅಫೀಸಿನತ್ತ ನಡೆದೆ. ಹೊರಗಡೆ ಅಂಗಳದಲ್ಲಿ ಎಣ್ಣೆಗೆಂಪು ಬಣ್ಣದ ಸನ್ಯಾಸಿನಿಯರ ಉಡುಗೆಗೆಳು ಒಣಗುತ್ತಿದ್ದುವು. ಹೇಸರಕತ್ತೆಂiಂದು ಎಲ್ಲಿಂದಲೋ ಸಾಮಾನು ಹೊತ್ತು ತಂದು ಹಾಕಿ ಹಗುರಾಗಿ  ಹಾಯಾಗಿ ಮಲಗಿ ಬಿಸಿಲು ಕಾಸುತ್ತಿತ್ತು. ಸುತ್ತಲೂ ಮತ್ತಷ್ಟು ಕೋಣೆಗಳನ್ನು ಕಟ್ಟುವ ಕಾಯಕ ನಡೆಯುತ್ತಿತ್ತು. ಸನ್ಯಾಸಿನಿಯರ ಜೊತೆಗೆ ಊರಿನ ಹೆಂಗಸರು, ಗಂಡಸರು ಮಾತಿಲ್ಲದೆ ದುಡಿಯುತ್ತಿದ್ದರು. ತೋmದಲ್ಲಿ ಹೂಗಳು ನಳನಳಿಸುತ್ತಿದ್ದುವು.

ಅಫೀಸಿನೊಳಗೆ ಹೊಕ್ಕಾಗ  ಮೆಲ್ಲನೆ ಟಿಬೆಟನ್ ವಾದ್ಯ ಸಂಗೀತ ಕೇಳಿಬರುತ್ತಿತ್ತು. ಜೊತೆಗೆ  ಸಮಾಧಿ ಸ್ಥಿತಿಯಲ್ಲಿದ್ದ ಗೌತಮ ಬುದ್ಧನಿಗೆ ಹಚ್ಚಿದ್ದ ಊದುಕಡ್ಡಿಯ ಘಮ. ಅಲ್ಲಲ್ಲಿ ಧ್ಯಾನಸ್ಥ ಮಂಜುಶ್ರೀ ತಾಂಖಾಗಳು. ಒಂದು ಕಡೆ  ಜಗತ್ತಿನೆಲ್ಲೆಡೆ ಈ ಪಂಥದ ಸನ್ಯಾಸಿನಿಯರು ಮಾಡುತ್ತಿರುವ ಕೆಲಸಗಳು, ತೆನ್ಜಿನ್ ಪಾಲ್ ಮೋ ವಿಷ್ವ ಪರ್ಯಾಟನೆಯ ಚಿತ್ರಗಳನ್ನು  ಹಾಕಿದ್ದರು. ಇನ್ನೊಂದು  ಕಡೆ ಸಾಲು ಸಾಲು ಪುಸ್ತಕಗಳು, ಸೀಡೀಗಳು. 
ತೆನ್ಜಿನ್ ಪಾಲ್ ಮೋ ಬರೆದ ಕೆಲವು ಪುಸ್ತಕ ಗಳನ್ನು ಕೊಂಡಮೇಲೆ  ಆಫೀಸಿನ ಹುಡುಗಿ ತಮ್ಮ ಸಂಘದ ಚಟುವಟಿಕೆಗಳನ್ನು ವಿವರಿಸಿದಳು.  ಆಗಲೇ ಮರಿಯಾ ಳಿಂದ ಸುದ್ದಿ  ತಿಳಿದಿದ್ದ ನಾನು ಆಸೆಯಿಂದ ಕೊನೆಗೆ ಕೇಳಿದೆ’ತೆನ್ಜಿನ್ ಪಾಲ್ ಮೋ ಅವರನ್ನು ನೋಡುವುದು ಸಾದ್ಯವೇ?’
ಅವಳು ನಗುತ್ತಾ ’ಸಾರಿ’ಎಂದಳು. ಅವರು ರಿಂಪೋಚೆಯೊಂದಿಗೆ ಮಹತ್ವದ ಮೀಟಿಂಗಿನಲ್ಲಿದ್ದರು. ’ನಾಳೆ ಅಪಾಯಂಟ್ ಮೆಂಟ್ ತಗೊಂಡು ಬನ್ನಿ’ ಎಂದಳು.
ಮಾರನೆಯ ದಿನ ನಾವು ವಾಪಸ್ಸು ಹೋಗಲು ಟಿಕೆಟ್ ಬುಕ್ಕಾಗಿತ್ತು. ನನ್ನ ನಿರಾಸೆ ಮುಚ್ಚಿಟ್ಟುಕೊಳ್ಳಲಾಗಲಿಲ್ಲ. ಅವಳು ಮತ್ತೆ ’ಸಾರಿ, ನಾಳೆ ಬನ್ನಿ’ ಎಂದು ಬೆನ್ನು ತಟ್ಟಿದಳು.

ಅಷ್ಟ ಹೊತ್ತಿಗೆ ಮೇಲ್ಮಹಡಿಯಿಂದ ಹತ್ತಾರು ಹೆಜ್ಜೆ ಸದ್ದುಗಳು, ಮೆಲು ಮಾತುಗಳು, ಕುಲುಕುಲ ನಗು ಕೇಳಿಸಿತು. ಆ ಹುಡುಗಿ ಎಲ್ಲಾ ಬಿಟ್ಟು ಹೊರಗೋಡಿದಳು. ನಾನೂ ಅವಳ ಹಿಂದೆ ಹೋದೆ. ತೆನ್ಜಿನ್ ಪಾಲ್ ಮೋ ಮೀಟಿಂಗ್ ಮುಗಿದಿತ್ತು. ಧರ್ಮಗುರು ರಿಂಪೋಚೆಯವರನ್ನು ಕಳಿಸಿಕೊಡಲು ಅವರು ಕಾರಿನತ್ತ ನಡೆದು ಬರುತ್ತಿದ್ದರು. ಆ ದಿವ್ಯ ಮೂರ್ತಿಗಳನ್ನು ನೋಡಲು ಎಣ್ಣೆಗೆಂಪಿನ ಉಡುಗೆಯ, ಬೋಳುತಲೆಯ, ಹೊಳಪುಗಣ್ಣಿನ ಹತ್ತಾರು ಎಳೆ ಸನ್ಯಾಸಿನಿಯರೂ ತಮ್ಮ ತಮ್ಮ ಕೆಲಸ ಬಿಟ್ಟು  ಓಡಿ ಬಂದರು. ಅವರ ಖುಶಿ ಉತ್ಸಾಹ ಎಲ್ಲೆಡೆ ತುಂಬಿ  ಇಡೀ ವಾತಾವರಣ ಹಗುರಾಯಿತು. ಕಾರು ಹೊರಟಿತು.

ತೆನ್ಜಿನ್ ಪಾಲ್ ಮೋ ರಿಂಪೋಚೆ ಅವರಿಗೆ ಕೈ ಬೀಸಿ ಮರಳುತ್ತಿದ್ದಂತೆ ಅವರ ಮುಖ ನೋಡಿದೆ. ಮೇಲಿದ್ದ  ವಿಶಾಲ ಆಗಸ  ಅವರ ನೀಲಿ ಕಣ್ಣುಗಳಲ್ಲಿ ಮೂಡಿತ್ತು. ಶಾಂತ  ಮಂದಹಾಸದ ತೇಜಸ್ವಿ ವ್ಯಕ್ತಿ.  ನಾನು ಅವರತ್ತ ಹೋಗಿ ಪರಿಚಯ ಮಾಡಿಕೊಂಡೆ. ’ನಿಮ್ಮ ಭೇಟಿಗಾಗಿ ಅಷ್ಟೊಂದು ಕಾತರದಿಂದ ಕಾಯುತ್ತಿದ್ದಾಗ ಬರಿಗೈಯ್ಯಲ್ಲಿ
ಹೋಗಬೇಕಾಗುತ್ತೇನೋಂತ ಅಷ್ಟು ಬೇಜರಾಗಿತ್ತು. ಅಯಾಮ್ ಲಕಿ’ಎಂದೆ.
ಚಿಕ್ಕ ಹುಡುಗಿಯಂತೆ ಉತ್ಸಾಹದಿಂದ ’ದೇರ್ ಯು ಗೋ! ಎಂದವರೇ ನನಗಾಗಿಯೇ ಕಾದಿದ್ದವರಂತೆ  ಹತ್ತಿರ ಬಂದು ತೋಳು ಬಳಸಿ ಅಪ್ಪಿಕೊಂಡರು.
’ನಾನು ತುಂಬಾ ಬಿಜಿಯಾಗಿದ್ದೇನೆ. ನಮ್ಮ ಆಶ್ರಮ ಸುತ್ತಾಡಿ. ಕೆಲಸ ನಡೆಯುತ್ತಿದೆ ನೋಡಿ. ವರ್ಕ್ ಶಾಪ್ ಗಳನ್ನೂ ನೋಡಿ ಬನ್ನಿ’ ಎಂದು ಒಬ್ಬ ೧೩-೧೪ ವರ್ಷದ ಹುಡುಗಿಯನ್ನು ಜೊತೆಗೆ  ಕಳಿಸಿ ಕೊmಟರು. ಹಳೆಯ ಗೆಳತಿಯಂತೆ, ’ಮತ್ತೆ ಬನ್ನಿ, ಮಾತಾಡೋಣ’ ಎಂದು ಕೈ ಬೀಸಿದರು.
ಯುವ ಸನ್ಯಾಸಿನಿಯರ ಆಶ್ರಮವೆಂದರೆ ಮುಸುಗಿನ ಹಿಂದೆ ಇಣುಕಿನೋಡುವ ದಿಗಿಲುಗಣ್ಣುಗಳ ವಿಷಾದ ತುಂಬಿದ ಮುಖಗಳೇ ಕಣ್ಣು ಮುಂದೆ ಬರುತ್ತಿದ್ದ ನನ್ನ ಮನಸ್ಸಿನ ಪರದೆಯ ಮೇಲೆ  ಹೊಸ ಬೆಳಕು ಮೂಡಿತ್ತು.

-ಉಮಾ ರಾವ್
ಧರ್ಮಶಾಲಾ, ೨೦೧೦



Tuesday, May 13, 2014

ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ = ಭಾಗ ೨






ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ = ಭಾಗ ೨

ನನ್ನ ಅದೃಷ್ಟ

೧೯೪೫ರಲ್ಲಿ ಬೊಂಬಾಯಿಗೆ ಬಂದಾಗ ಇಂಡಿಯನ್ ಎಕ್ಸ್ಪ್ರೆಸ್  ಸೇರಿಕೊಂಡೆ. ಸ್ವಲ್ಪ ವರ್ಷಗಳ ನಂತರ ಅಲ್ಲಿ ಒಂದು ಸ್ಟ್ರೈಕ್ ಆಯಿತು. ಆಗ ನನ್ನ ನನ್ನ ಸಹಾನುಭೂತಿಯೆಲ್ಲ ಕಾರ್ಮಿಕರ ಪರವಾಗಿತ್ತು. ಅದು ಮ್ಯಾನೇಜ್ಮೆಂಟ್ ಗೆ ಇಷ್ಟವಾಗಲಿಲ್ಲ.ಇಷ್ಟವಾಗಲಿಲ್ಲ. ರಾಜೀನಾಮೆ ನೀಡಿದೆ. ಮತ್ತೆ ಫ಼್ರೀ ಪ್ರೆಸ್ ಜರ್ನಲ್ ಸೇರಿಕೊಂಡೆ. ಭಾರತ್ ಜ್ಯೋತಿಗೂ ರೆಗ್ಯುಲರ್‌ಆಗಿ ಬರೀತಿದ್ದೆ.
ಅಸ್ಸಿಸ್ಟಂಟ್ ಎಡಿmರ್ ಆದೆ. ಆದರೆ  ನನಗೆಂದೂ ಕರಿಯರ್,  ದುಡ್ಡು ಮಾಡಬೇಕು. ಆಫೀಸರ್ ಆಗ್ಬೇಕು, ಮನೆ ಕಟ್ಟಬೇಕು...ಹಾಗೆಲ್ಲಾ ತೀವ್ರವಾಗಿ ಅನ್ನಿಸೇ ಇಲ್ಲ. ಐ ಕಾನ್ಟ್ ಅಂಡರ್ಸ್ಟ್ಯಾಂಡ್ ದಟ್. ಈಗ್ಲೂ ಬಾಡಿಗೆ ಮನೇಲಿರ್‍ತೀನಿ. ನಾನೇ ಅಡಿಗೆ ಮಾಡ್ಕೋತೀನಿ.  ಐ ಆಮ್ ಟೋಟಲಿ ಡಿವಾಯ್ಡ್ ಆಫ಼್ ಪೊಸೆಶನ್ಸ್.

ನನ್ನ ಅದೃಷ್ಟಕ್ಕೆ ಈ ವಯಸ್ಸಿನಲ್ಲೂ ನನ್ನ ಜ್ಞಾಪಕ ಶಕ್ತಿ ತುಂಬಾ ಚೆನ್ನಾಗಿದೆ. ಕಣ್ಣಿನ ತೊಂದರೆಇಲ್ಲ. ಟೈಮ್ಸ್ ಆಫ಼್ ಇಂಡಿಯಾ ಕೂಡ ರಾತ್ರಿ ಹೊತ್ತು ಓದಬಲ್ಲೆ - ಕನ್ನಡಕಾನೂ ಇಲ್ಲದೆ. ಈವನ್ ವಿದ್ ಆಲ್ ದೀಸ್ ಗಿಫ಼್ಟ್ಸ್ .॒.ಮಹತ್ತರವಾದದ್ದೇನೂ ಸಾಧಿಸಲಿಲ್ಲ ಅನ್ನಿಸುತ್ತೆ...

ನಾನವರಿಗೆ ವಿದಾಯ ಹೇಳಿ ಎದ್ದು ಬಂದಾಗ ಕತ್ತಲಾಗಿತ್ತು. ಅಷ್ಟೊಂದು ಮಹತ್ಸಾಧನೆ ಮಾಡಿಯೂ ಅಂಥಾ ಮಹತ್ತರವಾದದ್ದೇನೂ ಸಾಧಿಸಲಿಲ್ಲ ಎನ್ನುವ ಈ ವಿಕ್ಷಿಪ್ತ ಮೆಧಾವಿಯ ಮಾತುಗಳು ಮನಸ್ಸಿನಲ್ಲಿ ಧ್ವನಿಸುತ್ತಲೇ ಇದ್ದುವು.

ಅಹೋಬಲ ಶಂಕರರು ೧೯೯೭ರ ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈಯ್ಯಲ್ಲಿ ತೀರಿಕೊಂಡರು.



ಅಹೋಬಲಶಂಕರರ ಅನುವಾದಗಳು:
ನ್ಯಾಶನಲ್ ಬುಕ್ ಟ್ರಸ್ಟ್:
ಕವಿ-ತಾರಾಶಂಕರ ಬ್ಯಾನರ್ಜಿ, ಪೂರ್ಣಕುಂಭ -ರಾಣಿ ಚಂದಾ,ಜಾಗರಿ - ಸತೀಶ್ ಭಂಡಾರಿ.


ಕಾವ್ಯಲಯಾ ಪುಬ್ಲಿಕೇಶನ್ಸ್:
 ರವೀಂದ್ರನಾಥ ಠಾಕೂರ - ಪೋಸ್ಟ್ ಆಫೀಸ್, ಛೇಲಾ ಬೇಲಾ, ಬಲಿದಾನ, ರಕ್ತಕರವೀರ, ರಾಜಾ ರಾಣಿ, ನರ್ತಕಿಯ ಪೂಜೆ, ವಿನೋದಿನಿ, ಯೋಗಾಯೋಗ, ರವೀಂದ್ರ ಕಥಾಮಂಜರಿ-೩ ಹೊತ್ತಗೆಗಳು.
ಹಳ್ಳಿಯ ಸಮಾಜ, ಶುಭದಾ - ಶರತ್‌ಚಂದ್ರ ಚಟ್ಟರ್ಜಿ, ಇಂದಿರಾ, ಯುಗಳಾಂಗುರೀಯ, ರಾಧಾ ರಾಣಿ, ರಜನಿ -ಬಂಕಿಮಚಂದ್ರ ಚಟ್ಟರ್ಜಿ, ಸಾಹಿಬ್ ಬೀಬಿ ಔರ್ ಗುಲಾಮ್ - ಬಿಮಲ್ ಮಿತ್ರಾ, ಪಥೇರ್ ಪಾಂಚಾಲಿ, ಅಪರಾಜಿತೆ -ವಿಭೂತಿಭೂಷ್‌ಣ ಬಂದೋಪಾಧ್ಯಾಯ, ಬೊಂಬೆಯ ಕುಣಿತದ ಕತೆ - ಮಾಣಿಕ್ ಚಂದ್ರ ಬಂದೋಪಾಧ್ಯಾಯ, ಇನ್ನೂ ದೂರದ ದಾರಿ, ಮಾಯಾ - ಬಿರೇನ್ ದಾಸ್.

ವಿಕಾಸ್ ಪಬ್ಲಿಕೇಶನ್ಸ್:
ಮಲೆಯಾಳಂ ನಿಂದ ಇ.ಎಮ್. ಎಸ್. ನಂಬೂದರಿಪಾದರ ಆತ್ಮಕತೆ.
ಸ್ವಂತಕೃತಿಗಳು:
ನಾಟಕಗಳು: ದೇಶದ್ರೋಹಿ, ವರಭ್ರಷ್ಟ.
:

Friday, May 9, 2014

ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ -ಭಾಗ ೧








ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ -ಭಾಗ ೧

ಅಹೋಬಲ ಶಂಕರರನ್ನು ನೆನೆಯುತ್ತಾ॒

ಗುರುದೇವ ರವೀಂದ್ರನಾಥ ಟ್ಯಾಗೋರರ ಹುಟ್ಟುಹಬ್ಬದ ಸಮಯದಲ್ಲಿ ಅಹೋಬಲ ಶಂಕರರ ನೆನಪಾಗುತ್ತದೆ. ಅವರ ಮಗಳು ಪ್ರೇಮಾ ಮನೆಯಲ್ಲಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದುದು ನನ್ನ ಸೌಭಾಗ್ಯ. 

ಕನ್ನಡ ಓದುಗರಿಗೆ ವಿಶ್ವಕವಿ ರವೀಂದ್ರನಾಥ ಠಾಕೂರರ ಸಾಹಿತ್ಯವನ್ನು ಪರಿಚಯಿಸಿದವರು ಅಹೋಬಲ ಶಂಕರರು. ರವೀಂದ್ರರ ವಿನೋದಿನಿ, ಯೋಗಾಯೋಗ, ರಕ್ತ ಕರವೀರ ಮುಂತಾದವುಗಳಲ್ಲದೆ ಅವರ ಅಷ್ಟೂ ಕತೆಗಳನ್ನು ಒಳಗೊಂಡ ರವೀಂದ್ರ ಕಥಾಮಂಜರಿ -ಅಹೋಬಲ ಶಂಕರರು ಕನ್ನಡಿಗರಿಗೆ ಇತ್ತ ಅಮೂಲ್ಯ ಕೊಡುಗೆ. ಇಷ್ಟೇ ಅಲ್ಲದೆ, ಇವರು ಶರತ್ ಚಂದ್ರ ಚಟರ್ಜಿ, ಬಂಕಿಮ ಚಂದ್ರ ಚಟರ್ಜಿ, ಬಿಮಲ್ ಮಿತ್ರ, ತಾರಾಶಂಕರ ಬ್ಯಾನರ್ಜಿ, ವಿಭೂತಿ ಭೂಷಣ ಬಂದೋಪಾಧ್ಯಾಯ, ಮಾಣಿಕ್ ಚಂದ್ರ ಬಂದೋಪಾಧ್ಯಾಯ ಮುಂತಾದ ಶ್ರೇಷ್ಠ ಸಾಹಿತಿಗಳ ಸುಮಾರು ೨೫ ಕೃತಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ತಂದಿದ್ದಾರೆ. ’ಕವಿ’ ಹಾಗೂ ’ಪಥೇರ್ ಪಾಂಚಾಲಿ’ ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಬಿ.ಎ., ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.


ಇಂಗ್ಲೀಷ್, ಕನ್ನಡ ಅಲ್ಲದೆ ಹಿಂದೆ, ಬಂಗಾಲಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಪರಿಣಿತರಾಗಿರುವ ಇವರ ಇನ್ನೊಂದು ಮುಖ್ಯವಾದ ಕೊಡುಗೆ ಎಂದರೆ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ಇ.ಎಮ್.ಎಸ್. ನಂಬೂದರಿಪಾಡರ ಆತ್ಮಕಥೆ. ಇವರು ಕನ್ನಡದಲ್ಲಿ ಹಲವಾರು ಸಣ್ಣಕತೆ, ನಾಟಕಗಳನ್ನು ಬರೆದಿದ್ದಾರೆ.


೧೯೧೩ ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಅಹೋಬಲ ಶಂಕರರು, ನ್ಯಾಶನಲ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಚಿಕ್ಕವಯಸ್ಸಿನಿಂದಲೇ ಓದುವ ಹುಚ್ಚು. ಇಂಗ್ಲೀಷ್ ಸಾಹಿತ್ಯದಲ್ಲೂ ತುಂಬಾ ಅಭಿರುಚಿ. ಕನ್ನಡ, ಇಂಗ್ಲೀಷ್ ಅಲ್ಲದೆ ಜರ್ಮನ್, ಪ್ರೆಂಚ್ ಮತ್ತು ನಾರ್ವೇಜಿಯನ್ ಸಾಹಿತ್ಯದ ಅಧ್ಯಯನ. ಹರೆಯದಲ್ಲಿ ಸಾಹಿತ್ಯಕ್ಕಿಂತ ಹೆಚ್ಚು ರಾಜಕೀಯ ಚಳವಳಿಗಳ ಪ್ರಭಾವ. ಪರಿಣಾಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಹಾತ್ಮಗಾಂಧಿಯವರು ನಡೆಸಿದ್ದ ಸರ್ಕಾರದ ವಿರುದ್ಧ ಪ್ರಚಾರ ಚಳವಳಿಯಲ್ಲಿ ಸಕ್ರಿಯ ಪಾತ್ರ. ನಂತರ ಜೀವನೋಪಾಯಕ್ಕಾಗಿ ಮುಂಬೈಗೆ ಪ್ರಯಾಣ. ೧೯೪೫ ರಿಂದ ಇಂಗ್ಲಿಶ್ ದಿನಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಯ ಕೆಲಸ. ಅವರು ಮುಂಬೈ ಯ್ಯಲ್ಲಿಹಲವಾರು ವರ್ಷ ದುಡಿದಿದ್ದರು.  ಇಂಡಿಯನ್ ಎಕ್ಸ್ಪ್ರೆಸ್, ಫ಼್ರೀ ಪ್ರೆಸ್ ಜರ್ನಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಬರೆಯುತ್ತಿದ್ದ ಅಂಕಣ ’ಫ಼್ರಾಮ್ ದ ಈಜ಼ೀ ಚೇರ್’ ಮತ್ತು ಸಂಪಾದಕೀಯಗಳು ಅವುಗಳ ನೇರ, ದಿಟ್ಟ ನಿಲುವುಗಳಿಗಾಗಿ, ಸ್ವಾರಸ್ಯಕರ ಶೈಲಿಗಾಗಿ, ಅಪಾರ ಜನಪ್ರಿಯತೆ ಪಡೆದಿದ್ದುವು.  ಚಿಕ್ಕವಯಸ್ಸಿನಿಂದಲೇ ಓದುವ ಹುಚ್ಚು ಹಿಡಿಸಿಕೊಂಡಿದ್ದ ಅವರು, ಮೊದಲಿಂದ ಎಡಪಂಥೀಯರು. ಆ ಕಾರಣದಿಂದಲೇ ಇಂಡಿಯನ್ ಎಕ್ಸ್ಪ್ರೆಸ್ ಮ್ಯಾನೇಜ್ಮೆಂಟ್ ಜೊತೆ  ತಾತ್ವಿಕ ತಾಕಲಾಟಗಳಾಗಿ, ಅವರು ಕಾರ್ಮಿಕರ ಪರ ತೆಗೆದುಕೊಂಡ ನಿಲುವಿನಿಂದ ಕದಲದೆ ಇದ್ದಿದ್ದರಿಂದ ಕೊನೆಗೆ ಕೆಲಸಕ್ಕೇ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು.  ಆ ಕೆಲಸವಿಲ್ಲದ ಕಾಲದಲ್ಲಿ ಅವರು ಮನೆಯಲ್ಲೂ ಆರ್ಥಿಕ ಮುಗ್ಗಟ್ಟುಗಳನ್ನು ಅನುಭವಿಸಬೇಕದ ಪರಿಸ್ಥಿತಿ ಬಂದರೂ, ತಮ್ಮ ನಿರ್ಧಾರzಂದ ಜಗ್ಗಲಿಲ್ಲ.

ಅಹೋಬಲ ಶಂಕರ ಅವರು ೨೪ ವರ್ಷದವರಿದ್ದಾಗ  ೧೪ ವರ್ಷದ ವಯಸ್ಸಿನ ವೆಂಕಟಲಕ್ಶ್ಮಿ ಅವರೊಂದಿಗೆ ಮದುವೆ ಆಯಿತು. ಅವರಿಗೆ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು.
ಅವರ ಸಾಂಸಾರಿಕ ಬದುಕಿನಲ್ಲಿ ಬಿದ್ದ ದೊಡ್ಡ ಹೊಡೆತ ವೆಂದರೆ ಅವರ ಹೆಂಡತಿ ೨ ತಿಂಗಳ iಗುವನ್ನು ಬಿಟ್ಟು ತಮ್ಮ ೩೧ನೇ ವಯಸ್ಸಿನಲ್ಲಿ ತೀರಿಕೊಂಡಿದ್ದು.

ನನಗೆ ಅಹೋಬಲ ಶಂಕರರಂಥಾ ಅಪರೂಪದ ಸಾಹಸೀ ವ್ಯಕ್ತಿಯ ಪರಿಚಯವಾದದ್ದು ಮುಂಬೈಯ್ಯಲ್ಲಿ. ಅವರ ಮಗಳು ಪ್ರೇಮಾ, ನಾನು ಆತ್ಮೀಯ ಗೆಳತಿಯರು. ಮಗಳ ಮನೆಗೆ ವರ್ಷಕ್ಕೊಮ್ಮೆ ಬಂದು ಕೆಲವು ತಿಂಗಳುಗಳು ಕಳೆಯುವುದು ಅವರ ಅಭ್ಯಾಸವಾಗಿದ್ದಿತು .ಹಾಗಾಗಿ ನಾನು ಅವರನ್ನು ಭೇಟಿಯಾಗಲು ಆಗಾಗ ಹೋಗುತ್ತಿದ್ದೆ.
ಅವರೊಡನೆ  ಹರಟುವುದೆಂದರೆ ತುಂಬ ಮಜಾ ಇರುತ್ತಿತ್ತು.  ಎಲ್ಲಾ ಚಳುವಳಿಗಳಲ್ಲೂ, ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯ ಪಾತ್ರ ವಹಿಸಿದ್ದ ಅವರು ತಮ್ಮ ಬದುಕಿನುದ್ದದ ಅಪೂರ್ವ ಅನುಭವಗಳನ್ನು  ಹೇಳುವ ರೀತಿಯೂ ಚಿತ್ರವತ್ತಾಗಿರುತ್ತಿತ್ತು . ಅವರ ಲಿವಿಂಗ್ ರೂಮಿನ ತರೆದ ಗಾಜಿನ ಬಾಗಿಲ  ಮೂಲಕ ಸಂಜೆಯ ಸೂರ್ಯನನ್ನು ನೋಡುತ್ತಾ ಅವರಾಡಿದ ಮಾತುಗಳನ್ನು ಕೇಳುತ್ತಿದ್ದಾಗ ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ.


ಅಚ್ಚ ಬಿಳಿ ಧೋತರದ, ತೆಳುವಾದ ಮೈಕಟ್ಟಿನ, ಎಂದೂ ವಾಚ್ ತೊಡದ, ೮೦ರ ಹರೆಯದ ಅಹೋಬಲ ಶಂಕರರನ್ನು ಕಂಡ ತಕ್ಷಣ ಮನಸ್ಸಿಗೆ ತಟ್ಟುತ್ತಿದ್ದುದು ಅವರ ಕಣ್ಣುಗಳಲ್ಲಿನ ಹೊಳಪು, ಬದುಕಿನ ಸಣ್ಣಪುಟ್ಟ ಆಗುಹೋಗುಗಳಿಗೂ ಅವರು ಸ್ಪಂದಿಸುತ್ತಿದ್ದ ತೀವ್ರತೆ. ಅ ಂದೂ ಮಸುಕಾಗದಿದ್ದ ಮುಗ್ಧ ಅಚ್ಚರಿ. ಬೊಚ್ಚು ಬಾಯಿಂದ ಹರಿಯುತ್ತಿದ್ದ ಮಗುವಿನ ಮುಕ್ತ ನಗೆ. ಹೆಜ್ಜೆಹೆಜ್ಜೆಗೆ ರಾಜಿ ಮಾಡಿಕೊಳ್ಳದೆ ನಡೆದವರ ನಿಲುವಿನಲ್ಲಿ ಮಾತ್ರ ಹಣಕುವ ದಿಟ್ಟತನ. ಅಲ್ಲದೆ, ಚಿಕ್ಕಪುಟ್ಟ ಅನಾನುಕೂಲಗಳು, ಕಿರಿಕಿರಿಗಳಿಗೂ ಹೆದರುತ್ತಲೇ ಬದುಕುವ ಈಗಿನವರಿಗೆ ಅಚ್ಚರಿ ತರುವ ಒಂದು ಅಂಶವೆಂದರೆ  ತಮಗಾಗಿ ಅವರಲ್ಲಿಲ್ಲದಿದ್ದ  ದಿಗಿಲು.

ಆಗ ಅಹೋಬಲ ಶಂಕರರು ಮುಂಬೈಯಲ್ಲಿರುವ ಅವರ ಮಕ್ಕಳೊಂದಿಗಿದ್ದರು. ಅಂದು ಸಂಜೆ ಅವರ ಬದುಕಿನ ಕೆಲಕ್ಷಣಗಳ ನೆನಪುಗಳನ್ನು ಹಂಚಿಕೊಂಡಿದ್ದು ಒಂದು ಅಪೂರ್ವ ಅನುಭವ.



ಬೆಳಗು.

ನಾನಾಗ ಸೀನಿಯರ್ ಬಿಎಸ್‌ಸಿಯಲ್ಲಿದ್ದೆ. ನಮ್ಮ ತಂದೆಗೆ ೧೨ ಮಕ್ಕಳು. ಕಾಲೇಜಿಗೆ ಹೋದವನು ನಾನೊಬ್ಬನೇ. ಯಾವ ಮಗನೂ ಒಂದು ಸಲ ಯಾವ ಕ್ಲಾಸಿನಲ್ಲಾದರೂ ಫೇಲಾದರೆ ಬಿಡಿಸಿ ಬಿಡುತ್ತಿದ್ದರು. ನನಗೆ ಲೀಟರೇಚರ್ ಓದುವ ಆಸೆ ತುಂಬಾ ಇತ್ತು. ಮೈಸೂರಿಗೆ ಕಳಿಸಲು ಅಪ್ಪನ ಹತ್ತಿರ ಹಣವಿರಲಿಲ್ಲ. ಆದ್ದರಿಂದ ಬೆಂಗಳೂರಿನಲ್ಲೇ ಬಿ.ಎಸ್.ಸಿ. ಸೇರಿದೆ. ಹೆಚ್ಚು ಆಸಕ್ತಿ ಇರಲಿಲ್ಲ. ಪ್ರಾಕ್ಟಿಕಲ್ಸ್‌ಗೆ ಚಕ್ಕರ್ ಹೊಡೆದು ಆ ಸಮಯದಲ್ಲಿ ಕೇರಂ ಆಡುತ್ತಿದ್ದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಓದುತ್ತಿದ್ದೆ.

ಅಂದು ಹೋಳಿ ಹುಣ್ಣಿಮೆ ದಿನ. ಹಿಂದಿನ ರಾತ್ರಿ ತುಂಬಾ ಹೊತ್ತು ’ಮ್ಯಾಕ್ ಬೆತ್’ ಓದುತ್ತಿದ್ದೆ. ಬೆಳಗಿನ ಜಾವ ನನ್ನ ತಮ್ಮಂದಿರು ಗಲಾಟೆ ಮಾಡುತ್ತಾ ನೀರು ಎರಚಲು ಶುರು ಮಾಡಿದರು. ಎಣ್ಣೆ ನೀರು ಹಾಕಿಕೊಳ್ಳುವ ಸಂಭ್ರಮ. ನನ್ನನ್ನೂ ಎಬ್ಬಿಸಿದರು. ತಡವಾಗಿ ಮಲಗಿದ್ದರಿಂದ ಏಳಲು ಮನಸ್ಸಿರಲಿಲ್ಲ. ಅವರ ಮೇಲೆ ರೇಗಿದೆ. ಅಪ್ಪನಿಗೆ ಸಿಟ್ಟು ಬಂತು. ವರ್ಷಾವರಿ ಹಬ್ಬ, ಬೇಗ ಎಬ್ಬಿಸಿದರೆ ರೇಗ್ತಿಯಲ್ಲಾ... ನಿಂಗೆ ಬೇಡವಾದ್ರೆ ಎಲ್ಲಾದರೂ ಹೋಗೋ... ಎಂದು ಕೂಗಾಡಿದರು. ಕೋಪದಿಂದ ಆ ನಿಮಿಷವೇ ಮನೆಯಿಂದ ಹೊರ ಬಿದ್ದೆ. ಎಲ್ಲಿ ಹೋಗ್ತೀಯೋ ಎಂದು ಕೂಗಿದ ಅಪ್ಪನಿಗೆ ಎಲ್ಲೋ ಎಂದೆ.

ಗವಿಪುರದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ನಡೆದೆ, ತುಂಬಾ ಕತ್ತಲಿತ್ತು. ಹಿಂದಿನ ರಾತ್ರಿ ಎಲ್ಲಾ ಮ್ಯಾಕ್ ಬೆತ್ ಓದಿದ್ದರಿಂದ ತಲೆ ತುಂಬಾ ಕೆಟ್ಟ, ಕೊಲೆಗಡುಕತನದ ಯೋಚನೆಗಳು. ನಮ್ಮಪ್ಪನ ಬಗ್ಗೆ, ಮನೆಯವರೆಲ್ಲರ ಬಗ್ಗೆ ದ್ವೇಷ ಉಕ್ಕಿ ಬಂತು. ಹಾಗೇ ಅಲ್ಲಿ ಇಲ್ಲಿ ತಿರುಗಾಡುತ್ತಾ ಹೋಗಿ ಲಾಲ್‌ಬಾಗ್ ತಲುಪಿದೆ. ಒಂದು ಮರದ ಹತ್ತಿರ ಕುಳಿತೆ. ಇದಕ್ಕಿದ್ದಂತೆ ಕತ್ತಲು ಕರಗತೊಡಗಿತು. ನಸು ಬೆಳಕಿನಲ್ಲಿ ಸುತ್ತುವರಿದ ಮರಗಳು, ಹೂವು, ಬಳ್ಳಿ ಆಕಾರ ತಾಳುತ್ತಾ ಹೋದವು. ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ಅಳಿಲೊಂದು ಮೇಲೆ ಕೆಳಗೆ ಓಡುತ್ತಾ ಆಟವಾಡಿಕೊಳ್ಳುತ್ತಿತ್ತು. ಎಲ್ಲಾ ಎಷ್ಟೊಂದು ಸುಂದರವಾಗಿತ್ತು. ನಿಧಾನವಾಗಿ ಬೆಳಕು ಹರಿಯಿತು. ಐ ಸಾ ದ ಸ್ಪ್ಲೆಂಡರ್ ಆಫ಼್ ದ ಫ಼ೆನಾಮೆನನ್ ಕಾಲ್ಡ್ ಡಾನ್ .ಜೊತೆಗೆ ನನ್ನೆಲ್ಲಾ ಕೆಟ್ಟ ಯೋಚನೆಗಳೂ ಚದುರಿ ಹೋದವು. ಜಗತ್ತೆಲ್ಲಾ ಸುಂದರವಾಗಿ ಕಾಣುತ್ತಿತ್ತು. ನನ್ನ ಬಗ್ಗೆ ನನಗೇ ಜಿಗುಪ್ಸೆ ಬಂದಿತು. ಛೀ, ಎಂಥಾ ಕೆಲಸ ಮಾಡಿದೆ, ಬೆಳಗಾಗೆದ್ದು ಅಪ್ಪನ ಮೇಲೆ, ಒಡಹುಟ್ಟಿದವರ ಮೇಲೆ ಹಾಗೆ ಹಾರಾಡಿದೆನಲ್ಲಾಎಂದುಕೊಂಡು ಇದ್ದು ಮನೆಯ ಕಡೆ ಹೆಜ್ಜೆ ಹಾಕಿದೆ. ದಾರಿಯಲ್ಲಿ ಸಣ್ಣ ಮಕ್ಕಳು ನೀರು ಹಾಕಿಕೊಂಡು, ಸಕ್ಕರೆ ಸರದೊಂದಿಗೆ ಸಡಗರದಿಂದ ಓಡಾಡುತ್ತಿದ್ದರು. ಅವರ ತಲೆ ತುಂಬಾ ಹೂ. ಕತ್ತಲೂ ಎಲ್ಲವನ್ನೂ ಎಷ್ಟು ಇನ್ಫ್ಲುಯೆನ್ಸ್  ಮಾಡಿ ಬಿಟ್ಟಿತ್ತು. ಬೆಳಕು ಬೇರೆಯೇ ಮಾಡಿತಲ್ಲಾ...ಎಂದು ಅಚ್ಚರಿ ಪಡುತ್ತಾ ನಡೆದೆ. ಆ ಅನುಭವದಿಂದ ಹುಟ್ಟಿದ್ದು ನನ್ನ ಮೊದಲ ಕತೆ  ’ಡಾನ್’ ಮ್ಯಾಕ್ ಬೆತ್ ಪ್ರಭಾವ ಇದ್ದಿದ್ದರಿಂದ ಯೋಚನೆಗಳೆಲ್ಲಾ ಇಂಗ್ಲೀಷಿನಲ್ಲೇ ಬಂತು. ಇಂಗ್ಲೀಷಿನಲ್ಲೇ ಬರೆದೆ.

ಇವನು ಹುಟ್ಟಿರೋದೇ ಓದೋಕೇಂತ

ಮೊದಲಿಂದ ನನಗೆ ಓದೋ ಹುಚ್ಚು ಬಹಳ. ನನ್ನ ಸ್ನೇಹಿತರೆಲ್ಲಾ ತಮಾಷೆ ಮಾಡುತ್ತಿದ್ದರು. ಇವನು ಹುಟ್ಟಿರೋದೇ ಓದೋಕೇಂತ. ಅಂಗಡಿ ಪೊಟ್ಟಣ ಕಟ್ಟಿ ಎಸೆದ ನ್ಯೂಸ್ ಪೇಪರ್‌ಗಳನ್ನೂ ಬಿಡಿಸಿ ಓದುತ್ತಿದ್ದೆ. ಮೊರ್ ದ್ಯಾನ್ ರೀಡಿಂಗ್ ಐ ವಾಂಟೆಡ್ ಟು ಸೀ ದ ಲೈಫ಼್ ದಟ್ ವಸ್ ಡಿಪಿಕ್ಟೆಡ್. ಹಾಗೇ ದಾಸ್ತೋವ್ಸ್ಯಿ ಓದಿದ್ದು. ಆಗ ಎಲ್ಲರಿಗೂ ಟಾಲ್‌ಸ್ಟಾಯ್ ಗೊತ್ತಿತ್ತು. ದಾಸ್ತೋವ್ಸ್ಯಿ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಟೀಚರ್‌ಗಳಿಗೂ ಕೂಡ. ದಾಸ್ತೋವ್ಸ್ಯಿ ಬಗ್ಗೆ ಹೇಳಿದವರು ನಮ್ಮ ಭಾವ. ದಾಸ್ತೋವ್ಸ್ಯಿಯ ’ಕ್ರೈಮ್ ಎಂಡ್ ಪನಿಶ್ಮೆಂಟ್’ ಒಂದು ದಿನ ಸೆಕೆಂಡ್ ಹ್ಯಾಂಡ್ ಅಂಗಡಿಯಲ್ಲಿ ೩ ರೂಪಾಯಿಗೆ ಸಿಕ್ಕಿತ್ತು. ರಾತ್ರಿ  ಹಗಲು ಕೂತು ಓದಿ ೩ ದಿನದಲ್ಲಿ ಮುಗಿಸಿದೆ.  ದಟ್ ಚೇಂಜ್ಡ್ ಮೈ ಎಂಟೈರ್ ಲೈಫ಼್. ಐ ಗೇವ್ ಅಪ್ ಮೈ ಆಂಬಿಶನ್ಸ್ ಟು ಸಕ್ಸೀಡ್ ಇನ್ ಲೈಫ಼್ಟು॒ ಮೇಕ್ ಮನಿ  ॒ಮದುವೆ, ಮಕ್ಕಳು ಎಲ್ಲಾ ಆದದ್ದೂ ಒಂದು ಆಕ್ಸಿಡೆಂಟ್ ಅಷ್ಟೆ!

ಇತ್ತೀಚೆಗೆ ಹೆಚ್ಚಾಗಿ ಓದೋಕಾಗೊಲ್ಲ... ಮೊದಲೆಲ್ಲಾ ಮನೆಯವರು ಕಾಫಿ ಪುಡಿ, ಬೆಣ್ಣೆ ತರಲು ಮಾತುಂಗಾಗೆ ಕಳಿಸಿದರೆ, ಅಲ್ಲಿನ ಪುಟ್‌ಪಾತಿನಿಂದ ರಾಶಿ ರಾಶಿ ಪುಸ್ತಕ ಖರೀದಿ ಮಾಡಿ ಬಂದು ಮನೆಯಲ್ಲಿ ಬೈಸಿಕೊಳ್ತಿದ್ದೆ!


ನಿರಾಶ್ರಿತರಿಗೆ ವಾಲಂಟಿಯರ್
ಆಗ ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಜಪಾನ್ ಎಲ್ಲಾ ಕಡೆ ಬಾಂಬ್ ಮಾಡುವ ಭಯ ಮುತ್ತಿಕೊಂಡಿತ್ತು. ಅಕ್ಕ - ಮಕ್ಕಳನ್ನು ಊರಿಗೆ ಕರೆದುಕೊಂಡು ಬರಲು ನನ್ನನ್ನು ಅಪ್ಪ ಕಲ್ಕತ್ತಾಗೆ ಕಳಿಸಿದರು. ಆಗ ಅಲ್ಲಿ ೨-೩ ತಿಂಗಳು ನಿಲ್ಲಬೇಕಾಯಿತು.

ಆಗ ಇದ್ದಿದ್ದು ಬ್ರಿಟಿಶ್ ಸರ್ಕಾರ. ಯುದ್ಧ ಜೋರಾಗಿ,  ಸಹಸ್ರಾರು ನಿರಾಶ್ರಿತ ಭಾರತೀಯ ಕಾರ್ಮಿಕರು, ಅವರ ಕುಟುಂಬದವರು ದೋಣಿಗಳಲ್ಲಿ ಬರ್ಮಾದಿಂದ(ಮ್ಯನ್ಮಾರ್) ಭಾರತಕ್ಕೆ ಬಂದು ಇಳಿಯ ತೊಡಗಿದ್ದರು. ಕ್ಕೊಲ್ಕತ್ತ ತಲುಪಿದ ಕೂಡಲೇ ಅವರನ್ನು ಇಳಿಸಿಕೊಂಡು ದೇಶದಲ್ಲಿ ಅವರವರ ಊರುಗಳಿಗೆ ಕಳಿಸಲು ಬ್ರಿಟಿಶ್ ಸರ್ಕಾರ ಏರ್ಪಾಟುಗಳನ್ನು ಮಾಡಿತ್ತು. ಆಗ ಅನೇಕ ಸ್ವಯಂ ಸೇವಕರ ನೆರವು ಬೇಕಾಯಿತು. ಆಗ ಕೊಲ್ಕತ್ತಾದಲ್ಲಿದ್ದ ನಾನೂ ನನ್ನ ಕೈಲಾದಷ್ಟು ಸಹಾಯ ಮಾಡೋಣವೆಂದು ಹೆಸರು ಕೊಟ್ಟೆ. ಬಂದಿಳಿದವರಿಗೆ ಅವರವರ ತಾಯಿನುಡಿ ಬಿಟ್ಟರೆ ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ  ಅವರೊಡನೆ ಸಂಪರ್ಕ ಸುಲಭವಾಗಲೆಂದು ಸ್ವಯಂಸೇವಕರನ್ನು ಅವರವರು  ಆಡುವ ಭಾಷೆ ಯ ಮೇರೆಗೆ ಗುಂಪುಗಳನ್ನಾಗಿ ವಿಂಗಡಿಸಲಾಯಿತು. ನಾನು ’ತೆಲುಗು ಸ್ಪೀಕಿಂಗ್ ವಾಲಂಟಿಯರ್’ ಗುಂಪಿಗೆ ಸೇರಿದೆ. ಅಲ್ಲಿ ಬಂದಿಳಿದವರಲ್ಲಿ ಹೆಚ್ಚು ಜನ ಒರಿಸ್ಸಾ, ಆಂಧ್ರಾ ಜನರಿದ್ದರು.

ಆಗ ಭೇಟಿಯಾಗಿ ಇದುವರೆಗೂ ಮನಸ್ಸಿನಲ್ಲಿ ಕೂತುಬಿಟ್ಟಿರುವರು ಇವರಿಬ್ಬರು.  ಒಂದೇ ದೋಣಿಯಲ್ಲಿ ಬಂದಿಳಿದ ಈ ಜೋಡಿ ನನ್ನ ಟೇಬಲ್ಲಿಗೆ ನಡೆದು ಬಂದರು. ಅವಳು ತುಂಬಿದ ಬಸುರಿ. ಆಗಲೇ ನೋವು ಹತ್ತಿತ್ತು. ಭಯದಿಂದ ಅಳುತ್ತಿದ್ದಳು. ನಿಲ್ಲಲಾರದೆ ಒದ್ದಾಡುತ್ತಿದ್ದಳು. ಅವನು ಸಮಾಧಾನ ಮಾಡುತ್ತಿದ್ದ. ಧೈರ್ಯ ಹೇಳುತ್ತಿದ್ದ. ಯಾವುದೋ ಬುಡಕಟ್ಟು ಜನಾಂಗದವರಂತ್ತಿದ್ದ ಅವರು ವಿಚಿತ್ರ ತೆಲುಗು ಮಾತಾಡುತ್ತಿದ್ದರು. ನಾವು ಅವರನ್ನು ಪಬ್ಲಿಕ್ ಆಸ್ಪತ್ರೆಗೆ ವ್ಯಾನಿನಲ್ಲಿ ಕರೆದುಕೊಂಡು ಹೋದೆವು. ದಾರಿಯುದ್ದಕ್ಕೂ ಅವಳು ಅಳುತ್ತಲೇಇದ್ದಳು. ಅವನು ಧೈರ್ಯ ಹೇಳುತ್ತಿದ್ದ. ಪ್ರಯಾಣದ ಮಧ್ಯೆ ಚೆರೂಟ್ ಸೇದಬೇಕೆಂದಳು. ಅವನು ಹತ್ತಿಸಿಕೊಟ್ಟ. ಡಾಕ್ಟರ್ ಅವಳನ್ನು ಪರೀಕ್ಷಿಸಿ ಇನ್ನೂ ಒಂದು ದಿನ ಹೆರಿಗೆಯಾಗಲಾರದೆಂದು ಹೇಳಿ ಹೋದರು.

ಆಗ ನಾವು ಅವರಿಬ್ಬರನ್ನೂ ಕೂಡಿಸಿಕೊಂಡು ಅವರ ವಿವರಗಳನ್ನು ದಾಖಲು ಮಾಡಿಕೊಳ್ಳ ತೊಡಗಿದೆವು. ಆಗ ಅವಳ ಮುಖ್ಯ ಭಯ ಹೊರಬಿತ್ತು.’ನನ್ನ ಹತ್ತಿರ ಹಣ ಇಲ್ಲ. ನಾನು ಒಂದು ಪೈಸಾನೂ ಕೊಡಲಾರೆ’ ಎಂದು ಮತ್ತಷ್ಟು ಅತ್ತಳು.. ನಾವು ಅವನನ್ನು ಹತ್ತಿರ ಕರೆದು ಕೂಡಿಸಿಕೊಂಡು ’ನೀನೇನೂ ಹೆದರಿಕೋಬೇಡ. ಆಸ್ಪತ್ರೆ ಖರ್ಚು, ಔಷಧಿ ವೆಚ್ಚ ಎಲ್ಲಾ ಸರ್ಕಾರ ಕೊಡುತ್ತೆ. ನಾವೇ ನೋಡಿಕೊಳ್ಳುತ್ತೇವೆ. ನಿನ್ನ ಹೆಂಡತಿ ಬಗ್ಗೆ ಏನೂ ಯೋಚನೆ ಮಾಡಬೇಡ. ಹೆರಿಗೆಯಾಗಿ, ಡಾಕ್ಟರ್ ಒಪ್ಪಿಗೆ ಕೊಟ್ಟ ತಕ್ಷಣ ನೀನು ನಿನ್ನ ಹೆಂಡತಿ, ಮಗೂನ ನ ಕರ್ಕೊಂಡು ನಿನ್ನೂರಿಗೆ ಹೋಗಬಹುದು’ ಎಂದೆವು

ಅವನ ಮುಖ ಪೆಚ್ಚಾಯಿತು.’ ಹಂಡತಿಯಾ॒ರು ಹೆಂಡತಿ? ಅವಳು ನನ್ನ ಹೆಂಡತಿ ಅಲ್ಲ..ಎಂದು ಮುಗ್ಧತೆಯಿಂದ ಹೇಳಿದ.

ನನಗೂ ಕೋಪ ಬಂತು. ’ಏನು ಮಾತಾಡ್ತಾ ಇದೀಯಜೊ॒ತೆಜೊತೆಯಾಗಿ ಬಂದಿಳಿದಿದೀರಿಅ॒ವಳನ್ನು ಬಿಡದೆ ನೋಡ್ಕೋತಾ ಇದೀಯಾ.॒ಸಮಾಧಾನ ಮಾಡ್ತಾ ಇದೀಯಾನಾ॒ಚಿಕೆ ಆಗೊಲ್ವಾಅ॒ವಳನ್ನು ಊರಿಗೆ ಕರ್ಕೊಂಡು ಹೋಗು ಅಂದ ತಕ್ಷಣ
ಅವಳು ನನಗೆ ಏನೂ ಅಲ್ಲ ॒ನನ್ನ ಹೆಂಡತೀನೇ ಅಲ್ಲ ಅನ್ನೋಕೆ’॒ ಎಂದು ಬೈದೆ.

ಅವನು ಶಾಂತವಾಗೇ ಹೇಳಿದ. ’ಇಲ್ಲಅಯ್ಯಾ, ನಾವು ದೋಣಿ ಹತ್ತಿದಾಗಲೇ ನಾನು ಮೊದಲ ಸಲ ಅವಳನ್ನು ನೋಡಿದ್ದು. ತುಂಬಿದ ಬಸುರಿ, ನೋವು ತಿನ್ನುತ್ತಿದ್ದಳು, ಒಬ್ಬಂಟಿಯಾಗಿದ್ದಳು, ತುಂಬಾ ಹೆದರಿದ್ದಳು.  ಅವಳ ಜೊತೆ ಯಾರೂ ಇರಲಿಲ್ಲ. ಅವಳಿಗೆ ನಮ್ಮ ಭಾಷೆ ಬಿಟ್ಟರೆ ಏನೂ ಅರ್ಥವಾಗುತ್ತಿರಲಿಲ್ಲ. ಅವಳನ್ನು ಹೇಗಾದರೂ ಮಾಡಿ ಊರು ಸೇರಿಸಬೇಕು ಅಂದುಕೊಂಡೆ ಅಷ್ಟೆ.  ಅವಳು ಯಾರೆಂದು ನನಗೂ ಗೊತ್ತಿಲ್ಲ..’
ಅವನ ಮಾತುಗಳು ಕೇಳಿ ನಾವು ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು

ಯೂ ಸ್ವೈನ್ಸ್!

’ಇನ್ನೊಂದು ಘಟನೆಹೇ॒ಳಲೇಬೇಕು.  ರೆಫ಼್ಯೂಜಿಗಳನ್ನು ತುಂಬಿಕೊಂಡು ಬಂದ ದೋಣಿಗಳು ಬರುತ್ತಲೇ, ತಕ್ಕ ವ್ಯವಸ್ಥೆ ಮಾಡುವ ಉಸ್ತುವಾರಿ ನಡೆಸಲು ಸಲು ಒಬ್ಬ ಬ್ರಿಟಿಶ್ ಅಧಿಕಾರಿಯನ್ನು ನೇಮಿಸಿದ್ದರು.  ಅವನು ಮಹಾ ದರ್ಪದ ಮನುಷ್ಯ. ಕೋಪಿಷ್ಠ. ಅಹಂಕಾರಿ. ಮಾತು ಮಾತಿಗೂ ’ಹಂದಿಗಳಾ!’ ಎಂದು ರೇಗಾಡುವುದು, ನಮ್ಮೆಲ್ಲರಿಗೆ ಕೆಟ್ಟ ಕೆಟ್ಟ ಮಾತು ಬೈಯ್ಯೋದು, ಕೊಂಚ ತಪ್ಪಾದರೂ ಸಿಡಿದೇಳುವುದು ಮಾಡುತ್ತಿದ್ದ. ನಮಗೆಲ್ಲಾ ಅವನನ್ನು ಕಂಡರೆ ಆಗುತ್ತಿರಲಿಲ್ಲ.ಕ್ರೂರಿ,  ರಾಕ್ಷಸ , ಹೃದಯಹೀನ ಪಶು ಎಂದೆಲ್ಲಾ ಅವನ ಹಿಂದೆ ಶಾಪ ಹಾಕುತ್ತಿದ್ದೆವು.

ಅವತ್ತು ನೂರಾರು ಮುದುಕರನ್ನು ಹೊತ್ತ ದೋಣಿಯೊಂದು ಬಂದಿತು. ಎಲ್ಲರೂ ರೋಗ, ನಿತ್ರಾuದಿಂದ ನರಳುತ್ತಿದ್ದವರು. ಅವರೊಬ್ಬರಿಗೂ ಎದ್ದು ನಿಲ್ಲಲೂ ತ್ರಾಣವಿರಲಿಲ್ಲ. ಹಾಗಾಗಿ ನಾವುಗಳು ಎತ್ತಿಕೊಂಡು ಬಂದು ಮಲಗಿಸಬೇಕಾಗಿತ್ತು.
ಆ ಮುದುಕರಿದ್ದ ಸ್ಥಿತಿ ನೋಡಿ ನಾವೆಲ್ಲಾ ಅನುಮಾನಿಸುತ್ತಾ ಹಾಗೇ ನಿಂತು ಬಿಟ್ಟೆವು.’ಈ ಬಿಳಿಯ ಬಂದವನೇ ’ಏನು ಹಾಗೆ ನೋಡ್ತಾ ನಿಂತಿದೀರಾ, ಒಬ್ಬೊಬ್ಬರಾಗಿ ಎಲ್ಲರನ್ನು ಹೊತ್ತುಕೊಂಡು ಹೋಗಿ ಮಲಗಿಸಿ’ ಎಂದು ಆರ್ಡರ್ ಕೊಟ್ಟ.
ದೋಣಿಯ ಹತ್ತಿರ ಹೋದರೇ ಕೆಟ್ಟ ವಾಸನೆ ಹೊಡೆಯುತ್ತಿತ್ತು. ವಾಕರಿಕೆ ಬರುತ್ತಿತ್ತು. ನಿರ್ವಾಹವಿಲ್ಲದೆ, ಹಿಂಜರಿಯುತ್ತಲೇ ಒಬ್ಬೊಬ್ಬರನ್ನಾಗಿ ಎತ್ತಿಕೊಂಡು ಬಂದು ಮಲಗಿಸಿದೆವು. ಕೊನೆಗೊಬ್ಬ ಮುದುಕ ಉಳಿದೇ ಬಿಟ್ಟ.  ತನ್ನದೇ ಹೊಲಸಿನಲ್ಲಿ ಮುಳುಗಿಹೋಗಿದ್ದ ಅವನ ಹತ್ತಿರ ಸುಳಿಯಲೂ ಯಾರೂ ತಯಾರಿರಲಿಲ್ಲ.’
ಅಧಿಕಾರಿಗೆ ರೇಗಿ ಹೋಯಿತು. ’ಯೂ ಸ್ವೈನ್ಸ್,  ಯಾಕೆ ಕಾಯ್ತಿದೀರಿ? ಹೋಗಿ ಅವನನ್ನು ಎತ್ತಿಕೊಂಡು ಬನ್ನಿ!’ ಎಂದು ಘರ್ಜಿಸಿದ. ಆದರು ಯಾರೂ ಒಂದು  ಹೆಜ್ಜೆ ಮುಂದಿಡಲಿಲ್ಲ. ತಲೆ ತಗ್ಗಿಸಿ ನಿಂತು ಬಿಟ್ಟೆವು.

ಮರುಕ್ಷಣವೇ ಅವನು ಮಾತಾಡದೇ ದೋಣಿಯತ್ತ ಹೆಜ್ಜೆ ಹಾಕಿದ. ಬಾಗಿ ಅ ಮುದುಕನನ್ನು ಹಗುರಾಗಿ ಎತ್ತಿ, ಹುಷಾರಾಗಿ ಬೆನ್ನ ಮೇಲೆಹಾಕಿಕೊಂಡು ನಿಧಾನವಾಗಿ ನಡೆದುಬಂದ. ಶಿಬಿರದಲ್ಲಿ ಅವನನ್ನು ಮಲಗಿಸಿ ಏನೂ ಆಗದವನಂತೆ ಮರಳಿಬಂದ. ನಮ್ಮತ್ತ ತಿರುಗಿ, ನಮ್ಮೆಲ್ಲರ ಕೆಲಸ ಮುಂದುವರಿಸಲು ಹೇಳಿದ.

ರವೀಂದ್ರರು ಕನ್ನಡಕ್ಕೆ
ನಾನು ಕೊಲ್ಕತ್ತಾದಲ್ಲಿದ್ದ  ಸಮಯದಲ್ಲಿ ನನ್ನ ಅಕ್ಕನ ಮಕ್ಕಳು. ನೀನು ಶುಭದಾ ಓದಲೇಬೇಕು, ತುಂಬಾ ಚೆನ್ನಾಗಿದೆ ಎಂದು ಒತ್ತಾಯ ಮಾಡಿದರು. ನನಗೆ ಶಾಸ್ತ್ರೋಕ್ತವಾಗಿ ಬಂಗಾಲಿ ಅಕ್ಷರಾಭ್ಯಾಸ ಮಾಡಿಸಿದರು. ೩ ತಿಂಗಳಲ್ಲಿ ಬಂಗಾಲಿ ಕಲಿತೆ. ಶುಭದಾ ಓದಿದಾಗ ತುಂಬಾ ಹಿಡಿಸಿತು. ನಾನು ಕನ್ನಡಕ್ಕೆ ಮೊದಲು ಅನುವಾದ ಮಾಡಿದ ಪುಸ್ತಕ ಅದು. ಅದು ತುಂಬಾ ಜನಪ್ರಿಯವಾಯಿತು.  ಆಮೇಲೆ ಎಷ್ಟೋ ಬಂಗಾಲಿ ಪುಸ್ತಕಗಳನ್ನು ಓದಿದೆ.

ನಾನು ಅನುವಾದ ಸರಿಯಾಗಿ ಪ್ರಾರಂಭಿಸಿದ್ದು ಮುಂಬೈಗೆ ಬಂದ ಮೇಲೆ.. ಆಗ ಕಾವ್ಯಾಲಯದ ಚಿದಂಬರರು ರವೀಂದ್ರ ಕತೆಗಳನ್ನಷ್ಟನ್ನೂ ಕನ್ನಡಕ್ಕೆ ಮಾಡಿಕೊಡುತ್ತೀರಾ ಎಂದು ಕೇಳಿದರು. ಅವರ ಕತೆಗಳನ್ನು ಕನ್ನಡಕ್ಕೆ ತರಬೇಕೆಂಬುದು ನನ್ನ ಬಹುದೊಡ್ಡ ಆಸೆಯಾಗಿತ್ತು. ಮೊದಲಿಂದಲೇ, ಖುಷಿಯಿಂದ ಒಪ್ಪಿದೆ. ಹಾಗೇ ರವೀಂದ್ರ ಕಥಾಮಂಜರಿ ಬಂದದ್ದು. ೩ ಸಂಪುಟಗಳಲ್ಲಿ ಅದು ಮಾಡಿದಾಗ ತುಂಬಾ ತೃಪ್ತಿ ಸಿಕ್ಕಿತು. ಆಮೇಲೆ ಇನ್ನೂ ತುಂಬಾ ಪುಸ್ತಕಗಳನ್ನು ಅನುವಾದ ಮಾಡಿದೆ. ಛೋಕೆರ್‌ಬಾಲಿಯನ್ನು ಅದುವರೆಗೂ ಯಾರೂ ಅನುವಾದ ಮಾಡಿರಲಿಲ್ಲ. ಅಸಾಧಾರಣ ಕೃತಿ ಅದು. ಸಾಹಿಬ್ ಬೀಬಿ ಔರ್ ಗುಲಾಮ್ ಕೂಡ ಅಷ್ಟೆ. ಅದು ಮಾಡುವ ಹೊತ್ತಿಗೆ ಗುರುದತ್ತನ ಸಿನಿಮಾ ಬಂದಿತ್ತು. ಕಾದಂಬರಿ ಇನ್ನೂ ಚೆನ್ನಾಗಿದೆ ’ವಿನೋದಿನಿ’ ೨ ವರ್ಷ ಪಬ್ಲಿಷ್ ಮಾಡಲಾಗದೆ ತೊಂದರೆಯಾಯ್ತು. ಕೊನೆಗೆ ನಿರಂಜನರು ಓದಿ ತುಂಬಾ ಇಷ್ಟಪಟ್ಟರು. ೮ ದಿನದಲ್ಲೇ ಪತ್ರ ಬರೆದರು.

ಮಲೆಯಾಳಂನಲ್ಲಿ ಎಲ್ಲಕ್ಕಿಂತ ಒಳ್ಳೆಯ ಸಾಹಿತ್ಯ ಇದೆ

ನಾನು ಇಂಗ್ಲಿಷ್ ಅಲ್ಲದೆ ತೆಲುಗು, ತಮಿಳು, ಮಲೆಯಾಳಂ, ಬಂಗಾಲಿಯಲ್ಲಿ ಬೇಕಾದಷ್ಟು ಪುಸ್ತಕಗಳನ್ನು ಓದಿದ್ದೇನೆ. ಮಲೆಯಾಳಂ ಸಾಹಿತ್ಯದ ರಿಚ್ ನೆಸ್ ನೋಡಿ ಮಲೆಯಾಳಂ ಕಲಿತೆ. ಆಗ ನನಗೆ ೫೦ ವರ್ಷ. ನಂಬೂದರಿಪಾಡರ ಆತ್ಮಕಥೆ ಅನುವಾದ ಮಾಡಿದೆ. ಸುಮಾರಾಗಿ ಬಂದಿದೆ...

ಮಲೆಯಾಳಂನಲ್ಲಿ ಒಂದು ರೀತಿಯ ಅನನ್ಯತೆಇದೆ. ಡಿಸ್ಟಿಂಕ್ಟ್  ಥಿಂಕಿಂಗ್ ಇದೆ. ಭಾಷೆ ಉಪಯೋಗದಲ್ಲೂ ಅಷ್ಟೆ... ಮಲೆಯಾಳಂನಲ್ಲಿ ಸಂಸ್ಕೃತ ಸೇರಿರುವ ರೀತಿ ತುಂಬಾ ಚೆನ್ನಾಗಿದೆ. ಇಟ್ ಇಸ್ ಅನ್ ಎಕ್ಸಾಲ್ಟೆಡ್ ಲ್ಯಾನ್ಗ್ವೇಜ್. ಅಲ್ಲಿನ ಜನರಿಗೆ ಓದುವ ಹುಚ್ಚಿದೆ. ಇಂಗ್ಲಿಷಿನ ಪತ್ತೇದಾರಿ ಕಾದಂಬರಿಗಳು ಕೂಡ ಮಲೆಯಾಳಂನಲ್ಲಿ ಕಾಣಬಹುದು! ಕನ್ನಡದಲ್ಲೂ ಕೆಲವು ಗ್ರೇಟ್ ವರ್ಕ್ಸ್ ಇವೆ. ಅಂದಿನ ಮಾಡಿದ್ದುಣ್ಣೋ ಮಾರಾಯ, ನಿಸರ್ಗ ಇಂದಿರಾ ಉತ್ಕೃಷ್ಷ ಕೃತಿಗಳು. ಚಿಕ್ಕಂದಿನಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಪುಸ್ತಕಗಳಲ್ಲಿ ಚೋಮನ ದುಡಿ ಮುಖ್ಯವಾದದ್ದು. ಅಲ್ಲದೆ ಕೈಲಾಸಂ ನಾಟಕಗಳು ಮುಖ್ಯವಾಗಿ ಸೂಳೆ. ಆದರೂ... ಕನ್ನಡದಲ್ಲಿ ಜಗತ್ತಿನ ಉತ್ಕೃಷ್ಟ ಸಾಹಿತ್ಯಕ್ಕೆ ಸಾಟಿಯಾಗಿ ನಿಲ್ಲುವ ಕೃತಿಗಳು ಹೆಚ್ಚಿಲ್ಲ ಅನ್ನಿಸುತ್ತೆ. ಕೆಲವು ಇರಬಹುದು. ಹೆಮಿಂಗ್ವೇನ ’ಓಲ್ಡ್ ಮ್ಯಾನ್ ಎಂಡ್ ದ ಸೀ’ರೀತಿಯದು... ಪ್ರಪಂಚದಲ್ಲಿ ಎಲ್ಲರಿಗೂ ತಟ್ಟುವಂಥಾದ್ದು... ಎಷ್ಟಿದೆ? ಎಲ್ಲೋ ಏನೋ ಇನ್ನೂ ಒಂದು ಚೂರು ಬೇಕೆನಿಸುತ್ತದೆ. ಬೇರೆ ಭಾಷೆಗಳಲ್ಲೂ ಅಷ್ಟೆ. ಆದರೆ ಮಲೆಯಾಳಂನಲ್ಲಿ ಮಾತ್ರ ಆ ರೀತಿಯ ಅದ್ಭುತ ಕತೆಗಳಿವೆ. ಆ ಸೂಕ್ಷ್ಮತೆ, ಆ ದೃಷ್ಟಿ ಕೋನ ಎ॒ಬೌಟ್ ದಟ್ ಇಸ್ ಎಟೆರ್ನಲ್ ಇನ್ ಲೈಫ಼್ ಗಹನವಾದ ಒಳನೋಟಗಳು, ಬರೀ ಪ್ರಖ್ಯಾತ ಲೇಖಕರಲ್ಲಿ ಮಾತ್ರವಲ್ಲ, ಇನ್ನೂ ಇದೀಗ ಬರೆಯಲು ಶುರು ಮಾಡಿರುವ ಲೇಖಕರಲ್ಲೂ ಆ ರೀತಿಯ ಇನ್ಸೈಟ್ಸ್ ಇವೆ. ಅಮೇಜ಼ಿಂಗ್ ॒ತಕಳಿ ಶಿವಶಂಕರ ಪಿಳ್ಳೆಯಂಥ ಲೇಖಕರು. ಇಲ್ಲಿಗೆ ಬಂದ ಮೇಲೆ ಕನ್ನಡದಲ್ಲಿ ಹೊಸದಾಗಿ ಬರುತ್ತಿರುವ ಪುಸ್ತಕಗಳು ಅಷ್ಟಾಗಿ ಸಿಕ್ಕೊಲ್ಲ. ಸಿಕ್ಕದ್ದು ಓದುತ್ತೇನೆ.

ಆ ಎತ್ತರ

ಸಣ್ಣ್ಣ ಕತೆ ’ಡಾನ್’ ಇಂಗ್ಲಿಷಿನಲ್ಲಿ ಬರೆದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡಿದೆ. ’ಕತೆಗಾರ’ದಲ್ಲಿ ಬಂತು. ತುಂಬಾ ಜನ ಇಷ್ಟಪಟ್ಟರು. ಅದು ಇಂಗ್ಲಿಷಿನಲ್ಲೂ ಪ್ರಕಟವಾದದ್ದು ಸುಮಾರು ೨೦ ವರ್ಷಗಳ ನಂತರ! ಆಗ ಅದನ್ನು ತುಂಬಾ ಇಷ್ಟಪಟ್ಟ ಓದುಗರೊಬ್ಬರು, ಅದನ್ನು ಕನ್ನಡಕ್ಕೆ ಅನುವಾದ ಮಾಡಿ ’ಕರ್ಮವೀರ’ಕ್ಕೆ ಕಳಿಸಿದ್ದರು! ಅದು ಅವರಿಗೆ ಆಗಲೇ ಕನ್ನಡದಲ್ಲಿ ಬಂದಿದ್ದು ಗೊತ್ತಿರಲಿಲ್ಲ! ಆಮೇಲೆ, ಎಷ್ಟೋ ಕತೆಗಳು, ಕೆಲವು ನಾಟಕಗಳನ್ನು ಬರೆದೆ.

ಆದರೆ ಅನುವಾದ  ಶುರು ಮಾಡಿದ ಮೇಲೆ ಒರಿಜಿನಲ್ ಬಿಟ್ಟ ಹಾಗೇ ಆಯಿತು. ಆದರೆ, ನನಗೆ ರವೀಂದ್ರ ಕಥಾಮಂಜರಿಯಂಥಾ ಶ್ರೇಷ್ಠ ಕೃತಿಗಳನ್ನು ಅನುವಾದ ಮಾಡಿ, ಹೆಚ್ಚು ಜನರಿಗೆ ಮುಟ್ಟಿಸಿದಾಗ ತುಂಬಾ ತೃಪ್ತಿ ಸಿಗುತ್ತೆ. ಐ ಹ್ಯಾವ್ ಬಿಕಮ್ ರಿಯಲಿಸ್ಟಿಕ್. ಕೆಲವರು ಹೇಳುವಂತೆ ಅದು ಥ್ಯಾನ್ಕ್ ಲೆಸ್ ಜಾಬ್ ಅನ್ನಿಸೋಲ್ಲ. ಆದರೆ ’ಅಪರಾಜಿತೆ’ ೧೦ ವರ್ಷಗಳಿಂದ ಹಾಗೇ ಇದೆ. ಪಬ್ಲಿಷರ್‍ಸ್ ಸಿಕ್ಕಿಲ್ಲ.
ಅಷ್ಟೊಂದು ಒಳ್ಳೆ ಕತೆಗಳನ್ನು ಓದಿ,  ಆ ಮಟ್ಟದ ಬರವಣಿಗೆ ಎಕ್ಸ್ಪೀರಿಯನ್ಸ್ ಮಾಡಿದ ಮೇಲೆ ಅದರಲ್ಲಿ ನಾನು ಹತ್ತನೇ ಒಂದರಷ್ಟೂ ಬರೆಯಲಾರೆ ಅನ್ನಿಸುತ್ತೆ.ಪ್ಲಾಟ್ಸ್ ನನ್ನ ತಲೆ ತುಂಬಾ ಇದೆ. ಭಾಷೆ, ಅಭಿವ್ಯಕ್ತಿಯಲ್ಲಿ ಆ ಮಟ್ಟಕ್ಕೆ ಏರಲಾರೆ ಅನ್ನಿಸುತ್ತೆ. ನನಗೀಗೆ ಅಂಥಾ ಆತ್ಮವಿಶ್ವಾಸವೇ ಇಲ್ಲ.॒ಏನಾದರೂ ಅಂಥಾ ಗಹನವಾದದ್ದು, ಯಾರಿಗೂ ಸಿಕ್ಕದ ಆಳ ಸಿಕ್ಕರೆ ಮಾತ್ರ ಬರೀಬೇಕೂಂತ ಅನ್ನಿಸುತ್ತೆ...



-ಉಮಾ ರಾವ್



Sunday, May 4, 2014

ಬಾವಿ - ಇತ್ತೀಚೆಗೆ ಬರೆದ ಕತೆ







ಬಾವಿ
ಇತ್ತೀಚೆಗೆ ಬರೆದ ಕತೆ



ಶಿಕಾಗೋದ ಓಕ್ಪಾರ್ಕಿನಲ್ಲಿದ್ದ ಮಗನ ಮನೆಯ ಹಾಲಿನಲ್ಲಿ
ಬರಲಿರುವ ಕನ್ನಡ ಸೀರಿಯಲ್ ಗಾಗಿ ಕಾಯುತ್ತಾ ಕೂತಿದ್ದರು ರಾಮನಾಥ.
ಮೊದಲೆಲ್ಲಾ ಹೆಂಡತಿ ಶೀಲಾ ಜೊತೆ ಶಿಕಾಗೋಗೆ ಬಂದಾಗ ಇದ್ದ
ಉತ್ಸಾಹ ಈಗ ಇರಲಿಲ್ಲ. ಇದ್ದಕ್ಕಿದ್ದಂತೆ ತೀರಿಕೊಂಡ ಅವಳ
ನೆನಪುಗಳನ್ನು ಹೊತ್ತು ವಿಮಾನ ಹತ್ತಿದ್ದೂ ಮಗ, ಸೊಸೆಯ ಬಲವಂತಕ್ಕೆ.
’ನೀವೊಬ್ಬರೇ ಇಲ್ಲಿ ಒಂಟಿಯಾಗಿ ಇರುವ ಪ್ರಶ್ನೆಯೇ ಇಲ್ಲ. ಸುಮ್ಮನೆ
ನಮ್ಮೊಂದಿಗೆ ಬನ್ನಿ. ಒಂದೆರಡು ತಿಂಗಳಿದ್ದು ಬರುವಿರಂತೆ’ ಎಂದು ಒತ್ತಾಯ
ಮಾಡಿದ ವಿನೀತನಿಗೆ ಖಡಾಖಂಡಿತವಾಗಿ ಇಲ್ಲವೆನ್ನುವ, ವಾದಿಸುವ
  ಶಕ್ತಿ ಕೂಡಾ
ತನ್ನಲ್ಲಿಲ್ಲವೆನ್ನಿಸಿತ್ತು. ಯಾಂತ್ರಿಕವಾಗಿ ಒಂದೆರಡು ಬಟ್ಟೆ , ಔಷಧಿಗಳನ್ನು
ಸೂಟ್ ಕೇಸಿನಲ್ಲಿ ಹಾಕಿಕೊಂಡು ಹೊರಡಲು ತಯಾರಾಗಿದ್ದರು.
ರೂಮಿನ ಬಾಗಿಲು ಮುಚ್ಚಿ ಕಪಾಟಿನಲ್ಲಿದ್ದ ತಮ್ಮ ಮದುವೆಯ
ಫೋಟೊ ಎತ್ತಿ ಒಂದು ಕಂದು ಕವರಿನಲ್ಲಿ ಹಾಕಿ ಸೂಟ್ಕೇಸಿನಲ್ಲಿ  ತನ್ನ ಬಟ್ಟೆಗಳ ನಡುವೆ
ಇಟ್ಟಿದ್ದರು. ಇಬ್ಬರೂ ಹದಿಹರೆಯದವರಂತೆ  ಕಾಣುತ್ತಿದ್ದ ಕಪ್ಪು
ಬಿಳುಪಿನ ಫೋಟೋ. ಕಣ್ಣುಗಳಲ್ಲಿ ಏನು ಹೊಳಪು, ಎಷ್ಟು ಸಂತಸ.  ಬದುಕೆಲ್ಲಾ ಹೀಗೇ
ಇರುವುದೆಂಬ ಭರವಸೆ ಹೊತ್ತ ಸಂಕೋಚದ ನಗು.
                                 *
ಇಲ್ಲಿಗೆ ಬಂದು ನಿಧಾನವಾಗಿ ತಿಂಗಳುಗಳು ಉರುಳಿತ್ತು. ಯಾವಾಗಲೂ ಮನಸ್ಸಿನಲ್ಲಿ
ಬಣಬಣ. ಶೀಲಾ ಜೊತೆ ಕಳೆದ ದಿನಗಳ ನೆನಪು.
ಅವತ್ತಿನಿಂದ ಹೊಸ ಸೀರಿಯಲ್ ’ಮಲಯ ಮಾರುತ’ ಪ್ರಾರಂಭ
ವಾಗಲಿತ್ತು. ಶೀಲಾ ಇದ್ದಿದ್ದರೆ ಎಷ್ಟು ಖುಶಿಯಾಗುತ್ತಿದ್ದಳೋ.
ಅಮೆರಿಕಾಗೆ ಬಂದಾಗ ಕನ್ನಡ ಸೀರಿಯಲ್ ಗಳನ್ನು ತುಂಬಾ ಮಿಸ್
ಮಾಡುತ್ತಿದ್ದಳು. ಇದು ಅವಳ ಮೆಚ್ಚಿನ ನಿರ್ದೇಶಕರ ಸೀರಿಯಲ್ ಬೇರೆ. ಹೌದು.
ಮತ್ತೆ ಮತ್ತೆ ॒ಶೀಲಾ ಇದ್ದಿದ್ದರೆ ಅನ್ನಿಸುತ್ತಲೇ ಇತ್ತು.


ಅಮೆರಿಕಾಗೆ ಪ್ಲೇನ್ ಹತ್ತುವಾಗ ಶೀಲಾ ಇದ್ದಿದ್ದರೆ. ಮನೆಯಲ್ಲಿ
ಬೆಳಿಗ್ಗೆ ಘಮ್ಮನೆಯ ಕಾಫಿ ಪರಿಮಳ ತೇಲಿ ಬಂದಾಗ ತಾನು ಮಾಡಿದ ಕಾಫಿಗಾಗಿ
ದಿನಾ ಬೆಳಿಗ್ಗೆ ಕಾಯುತ್ತಿದ್ದ ಶೀಲಾ ಇದ್ದಿದ್ದರೆ.

        ಸಂಜೆ ಸ್ಕೂಲಿಂದ ಬಂದ ಮೊಮ್ಮಗನ
ಜೊತೆ ಚೈನೀಸ್ ಚೆಕರ್ಸ್ ಆಡುವಾಗ ಅಲ್ಲಿ ಶೀಲಾ ಇದ್ದಿದ್ದರೆ. ಹೂವಿನಂತಿರುವ
        ಬ್ರೆಡ್ಡಿಗೆ ಬೆಣ್ಣೆ ಹಚ್ಚುವಾಗ ಶೀಲಾ ಇದ್ದಿದ್ದರೆ. ಬೆಳಿಗ್ಗೆ ಎಳೆ ಬಿಸಿಲಲ್ಲಿ  ವಾಕ್ ಹೋಗುವಾಗ
        ಅದೇ ಚಳಿಗಾಲ ಮುಗಿದು ಎಚ್ಚೆತ್ತುಕೊಳ್ಳುತ್ತಿದ್ದ ಹುಲ್ಲು, ಕಣ್ಣು ಬಿಡುತ್ತಿದ್ದ
        ಟ್ಯೂಲಿಪ್ ಹೂಗಳನ್ನು
        ನೋಡಿದಾಗ ಜೊತೆಗೆ ಶೀಲಾ ಇದ್ದಿದ್ದರೆ.
ಪ್ರತಿ ಚಿಕ್ಕಪುಟ್ಟ ಘಟನೆಯ ನಂತರವೂ ’ಶೀಲಾ ಇದ್ದಿದ್ದರೆ’ ಎಂದು
ಎದೆ ಬಡಿದುಕೊಳ್ಳುತ್ತಲೇ ಇತ್ತು.
                                   *

ಇವರು ತನ್ನ ಗುಂಗಿನಲಿರುವಾಗ ಟೈಟಲ್  ಸಾಂಗ್ ಮುಗಿದು ಮೊದಲ ಸೀನು ಶುರುವಾಗಿತ್ತು.
ತೆರೆಯ ಮೇಲೆ ಮೊದಲು ಮೂಡಿದ್ದು ಒಂದು  ಬಾವಿ. ಹಾಂಇ॒ದೇನಿದು. ಅದೇ ಬಾವಿ. ತಮ್ಮ ಮನೆಯ
ಹಿಂದಿದ್ದ ಬಾವಿ.ಹೇಗೆ ಸಾಧ್ಯ? ಬರೀ ತನ್ನ ಭ್ರಮೆ ಅಷ್ಟೆ. ಆದರೆ.॒ಎಲ್ಲಾ ಪರಿಚಿತ. ಅದೇ ಬಾವಿ ಕಟ್ಟೆ.
ಅಲ್ಲಲ್ಲಿ ಉದುರಿದ್ದ ಗಾರೆ.
ಸ್ವಲ್ಪ ತುಕ್ಕು ಹಿಡಿದಿದ್ದ ರಾಟೆ. ಒಂದು ಮೂಲೆಯಲ್ಲಿ ಈಗ ಮಸುಕಾದ ಕೆಂಪು  ಪೇಂಟ್‌ನಲ್ಲಿ ಚೆನ್ನ
ಬರೆದಿದ್ದ ’ಮೂರು ನಾಮ, ನಾಳೆ ಬಾ.’
ಮೇಲಿಂದ  ನೇತಾಡುತ್ತಿದ್ದ ಹಗ್ಗ. ಅದಕ್ಕೊಂದು ಕೊಡ. ತಾನು ಹುಟ್ಟಿದಾಗಿನಿಂದ ಕಂಡಿದ್ದ ಬಾವಿ॒
ತಪ್ಪಾಗುವುದು ಸಾಧ್ಯವೇ ಇರಲಿಲ್ಲ. ತೆರೆ ಮೇಲೆ ಇಬ್ಬರು ಹುಡುಗಿಯರು ನಿಧಾನವಾಗಿ ಬಂದು
ಬಾವಿಯ ಕಟ್ಟೆ ಮೇಲೆ ಕೂತು ಮಾತಾಡ ತೊಡಗಿದರು. ಏನೋ ಗುಟ್ಟು ಹಂಚಿಕೊಳ್ಳುತ್ತಿದ್ದಂತೆ.
ಹಾಗೆಯೇ ಬಾವಿ ಕಟ್ಟೆ ಹತ್ತಿ ಕೂತರು. ಅಯ್ಯೊಹು॒ಶಾರು! ಜಾರಿದರೆ ಗತಿ ಏನು?!
ಯಾವಾಗಲೂ ತಮ್ಮ ಮನೆಯಲ್ಲಿ ಯಾರು ಬಾವಿ ಕಟ್ಟೆಯ ಮೆಲೆ ಕೂತರೂ ಹಿಂದೆಯೇ ಕೇಳಿ ಬರುತ್ತಿದ್ದ
ಕೂಗು. ಅವರ ಕಾಲು ಸಣ್ಣಗೆ ನಡುಗಿತು. ಎಷ್ಟು ಆಳ. ಒಳಗೆ ತಿಳಿನೀರು. ಬಗ್ಗುತ್ತಿದ್ದಾರೆಜಾ॒ರಿದರೆ?
ದೃಶ್ಯ ಬದಲಾಗಿತ್ತು.

                                  *
ರಾಮನಾಥರ ಯೋಚನೆಗಳು ಹಾಗೆಯೇ ಎಲ್ಲೊ ತೇಲಿ ಹೋಗಿ ಟಿವಿ ಪರದೆಯ ಮೇಲೆ ಬರುತ್ತಿದ್ದ
 ಚಿತ್ರಗಳು ಮಸುಕಾದುವು. ಮತ್ತೆ ಅದೇ ಪ್ರಶ್ನೆ ಮನದ ಮೂಲೆಯಿಂದ ಇಣುಕಿತು.
        ತಾನು ಮನೆ ಮಾರಿದ್ದು ಸರಿಯೆ? ಆದರೆ.॒
        ಅತ್ಮೀಯ ಗೆಳೆಯ ಮೂರ್ತಿಗೆ ತಾನೆ ಮಾರಿದ್ದು. ಮಾರುವ ಮೊದಲು ತುಂಬಾ ಯೋಚಿಸಿ ಆಗಿದೆ.
        ಒಂದು ಫ಼್ಲಾಟ್ ಬುಕ್ ಮಾಡಿಯೂ ಆಗಿದೆ. ದುಡ್ಡು ಪೂರ್ತಿ ತಗೊಂಡೂ ಆಗಿದೆ.ಈಗ ತನ್ನ ತೀರ          
        ’ಪರ್ಸನಲ್ ಬಿಲಾಂಗಿಂಗ್ಸ್’ ಒಂದು ಟ್ರ್ರಂಕಿನಲ್ಲಿಟ್ಟು ಬೀಗ ಹಾಕಿ ’ಜೋಪಾನ, ಮುಂದಿನ
         ಸಲ ತಗೊಂಡು ಹೋಗ್ತೀನಿ. ಅಷ್ತು ಹೊತ್ತಿಗೆ ನನ್ನ ಫ಼್ಲಾಟ್   ರೆಡಿಯಾಗಿರುತ್ತದೆ.     
        ಅದನ್ನು ಕಾಪಾದುವ ಜವಾಬ್ಬಾರಿ ನಿನ್ನದು’ ಎಂದು ಒಪ್ಪಿಸಿ ಆಗಿದೆ. ಅವನು ’ಖಂಡಿತ’
           ’ನಿನ್ನ ಎಷ್ಟು ಪ್ರೀತಿಯ ವಸ್ತುಗಳು  ಇದರಲ್ಲಿವೇಂತ ನನಗೆ ಗೊತ್ತು.’
        ’ಇದು ಈಗಲೂ ನಿನ್ನ ಮನೇನೇ ಕಣೋ, ನಾ ಬೇರೆ ನೀ ಬೇರೆ ಏನೋ’ ಎಂದು
        ಬೆನ್ನು ತಟ್ಟಿದಾಗ ಅವನ ಕಣ್ಣಂಚಿನಲ್ಲಿ ಕಂಡು ಬಂದ  ಹನಿ ತನ್ನ ನಂಬಿಕೆ, ಅಕ್ಕರೆಯನ್ನು
        ಗಟ್ಟಿಯಾಗಿಸಿದ್ದುವು.
        ’ಅಪ್ಪ, ನಿಮ್ಮ ಸೀರಿಯಲ್ ಮುಗಿಯಿತಲ್ಲಾ, ಊಟಕ್ಕೆ ಏಳ್ತೀರಾ, ಇನ್ನೂ ಪ್ಯಾಕಿಂಗ್
        ಕೂಡಾ  ಮುಗಿದಿಲ್ಲ.॒ಎಂದು ಮಗ ಎಚ್ಚರಿಸಿದಾಗ , ಹೌದಲ್ಲಾ, ಎಲ್ಲೋ ಕಳೆದು ಹೋಗಿದ್ದೆ
        ಮುಂದೇನಾಯಿತೋ ಗೊತ್ತೇ ಆಗಲಿಲ್ಲ, ಏನೇನೋ ನೆನಪುಗಳು
        ಎಂದು ಕೊಳ್ಳುತ್ತಲೇ ಟಿವಿ ಆರಿಸಿ ರಾಮನಾಥ ಎದ್ದರು.

                                       *
        ಊಟ ಮುಗಿಸಿ, ಸ್ವಲ್ಪ ಹೊತ್ತು ಹರಟಿ  ಹೊಡೆದು ಎದ್ದು ಬಂದ ರಾಮನಾಥ
        ತನ್ನ ರೂಮಿನಲ್ಲಿ ಚದುರಿ ಬಿದ್ದಿದ್ದ ಬಟ್ಟೆಗಳೂ, ಪುಸ್ತಕಗಳು, ಅದೂ ಇದೂ ಎಲ್ಲಾ ಸೇರಿಸಿ
        ಸೂಟ್ಕೇಸಿನಲ್ಲಿ ತುರುಕಿದರು. ತನ್ನ ಟೇಬಲ್ ಮೆಲಿದ್ದ ತನ್ನ, ಶೀಲಾ ಕಪ್ಪು ಬಿಳು ಪಿನ
        ಫೋಟೊ ಒಳಗಿಡಲು ಕೈಗೆತ್ತಿಕೊಂಡಾಗ ಒಳಗೆ ಬಂದ ಮಗ’ಅದು ಇಲ್ಲೇ  ಇರಲಿ ಬಿಡಿ ಅಪ್ಪ...’
        ಎಂದವನೇ ಅವರ ಮುಖ ಸ್ವಲ್ಪ ಪೆಚ್ಚಾದದ್ದು ಕಂಡು  ’ನೀವು ಮತ್ತೆ ಬೇಗನೇ ಬರುತ್ತೀರಲ್ಲಾ’
        ಎಂದು ಸೇರಿಸಿದ. ರಾಮನಾಥ ಏನು ಹೇಳಬೇಕೋ ತೋಚದೆ ’ಇಲ್ಲ.॒ಇಲ್ಲಾ. ಆಗ ಮತ್ತೊಂದು
        ಕಾಪಿ ಮಾದಿಸಿ ತರ್ತೀನಿ ನಿನಗೋಸ್ಕರ ’ಎಂದದ್ದನ್ನು ಕಂಡು ಮಗ ಹೆಚ್ಚಿನ ಚರ್ಚೆಗೆ ಹೋಗಲಿಲ್ಲ.
        ಪಾಸ್ಪೋರ್ಟ್, ಹಣ, ಕಾರ್ಡುಗಳು, ಔಷಧಿ  ಎಲ್ಲಾ ಜೋಪಾನವಾಗಿ ಇಟ್ಟುಕೊಂದು ಎಲ್ಲಾ ಒಂದು ಸಲ
        ಚೆಕ್ ಮಾಡಿದಾಗ ತಾನೇನೂ ಮರೆತಿಲ್ಲ ಎಂದು ರಾಮನಾಥರಿಗೆ ಖಾತ್ರಿಯಾಯಿತು.
        ಎಷ್ಟು ಹೊತ್ತಾದರೂ ನಿದ್ದೆ ಬರದು. ಮತ್ತೆಮತ್ತೆ ಎದುರು ಬರುತ್ತಿದ್ದ ಆ ಬಾವಿ.
        ಅಮ್ಮ ತನಗೆ, ಚಿಕ್ಕಿಗೆ ಆ ಬಾವಿ ಕಟ್ಟೆ ಪಕ್ಕ ಕೂಡಿಸಿಕೊಂಡು ಕೈತುತ್ತು ಹಾಕುತ್ತಿದ್ದುದು.
        ತಾನು ಗೆಳೆಯರೊಡನೆ ಅಲ್ಲೇ ಒರಗಿ ನಿಂತು ಗಂಟೆಗಟ್ಟಳೆ ಹರಟುತ್ತಿದ್ದುದು. ಅಜ್ಜಿ ಉಸ್ ಉಸ್
        ಎನ್ನುತ್ತಾ ದೇವರ ಪೂಜೆಗಾಗಿ ನೀರು ಸೇದಿಕೊಳ್ಳುತ್ತಿದ್ದುದು. ಅದನ್ನು ಕಂಡ ಅಪ್ಪ ನೀನೇನೊ
        ಕಾಲೋ ಬೆನ್ನೋ ಉಳುಕಿಸಿಕೊಳ್ಳುತ್ತೀಯಾ ಎಂದು ಬೈಯ್ಯುತ್ತಿದ್ದುದು. ಅಂದು ಸಂಜೆ
        ಮಸುಕುಗತ್ತಲಿನಲ್ಲಿ ತಂಗಿ ಚಿಕ್ಕಿ ಬಾವಿ ಕಟ್ಟೆ ಹಿಂದೆ ಅಡಗಿ ಕೂತು ಯಾವುದೋ ಹುಡುಗನೊಡನೆ ಪಿಸಪಿಸ
        ಮಾತಾಡುತ್ತಿದ್ದುದನ್ನು ಕಂಡ ತಾನು ಕಾಣದಂತೆ ಮೆಲ್ಲಗೆ ಒಳಗೆ ಬಂದದ್ದು.ಆಗಲೇ ’ಚಿಕ್ಕೀ’
           ಎಂದು ಕರೆಯುತ್ತಾ ಬಂದ ಅಮ್ಮನಿಗೆ’ಈಗ ಚಿಕ್ಕಿ ಪಕ್ಕದ ಮನೆ ಶೈಲೂನ ಏನೋ
           ಕೇಳಲು ಹೋದಳು’ಎಂದು  ಸುಳ್ಳು  ಹೇಳಿ ಚಿಕ್ಕೀನ ಬಚಾಯಿಸಿದ್ದು. ಅಜ್ಜಿ ಪ್ರತಿ ಹಬ್ಬದ
           ಹಿಂದಿನ ದಿನ ಬೆಳ್ಳಿ ಪಾತ್ರೆ ರಾಶಿ ಹಾಕಿಕೊಂಡು ಫಳ ಫಳನೆ ಬೆಳಗುತ್ತಿದ್ದುದು. ತಮಗೆ
           ದಿನಾ ರಾತ್ರಿ ಸ್ವಾರಸ್ಯಕರ ಕತೆಗಳನ್ನು ಹೇಳುತ್ತಾ, ನಗಿಸುತ್ತಿದ್ದ,
          ದಿಗಿಲು ಗೊಳಿಸುತ್ತಿದ್ದ ತಾತ ಇದ್ದಕ್ಕಿದ್ದಂತೆ ಒಂದು ದಿನ
           ಮಾತಾಡುವುದನ್ನೇ ನಿಲ್ಲಿಸಿ , ಹಗಲು ರಾತ್ರಿ ಗೋಡೆಗೆ ಪೂಜೆ ಮಾಡಲು ಶುರು ಮಾಡಿದಾಗ ಅಪ್ಪ
           ಅಮ್ಮ ದೃತಿಗೆಟ್ಟಿದ್ದು. ಮನೆಯವರನ್ನೆಲಾ ಕರೆದು ತಾತ ಬಾವಿ ಕಟ್ಟೆ ಕಡೆ ಹೋಗದಂತೆ ಒಂದು
           ಕಣ್ಣಿಟ್ಟಿರಲು ಹೇಳಿದ್ದು.॒ ಶೀಲಾ ಹೋದ ದಿನ ಕಾರ್ಪೊರೇಶನ್ ನೀರು ಬರದೆ ಕಂಗಾಲಾದಾಗ
           ಬಂದವರೆಲ್ಲಾ ಏನೂ ಆಗದಂತೆ
           ಕೊಡಗಟ್ಟಳೆ ನೀರು ಒಬ್ಬರ ನಂತರ ಒಬ್ಬರುಸೇದಿ ಸೇದಿ ಹಾಕಿದ್ದು॒


           ಎಷ್ಟೊಂದು ನೆನಪುಗಳಿದ್ದುವು ಆ ಬಾವಿಗೆ.॒ ತಮ್ಮ ಇಡೀ ಬದುಕಿನ ಸಂತಸ, ಗಾಬರಿ,
           ನೋವು, ಮೋಸ, ತಲ್ಲಣಗನ್ನು ತನ್ನೊಳಗಿನ ತಣ್ಣನೆಯ ತಿಳಿನೀರಿನಲ್ಲಿ ಕರಗಿಸಿಟ್ಟುಕೊಂಡಿತ್ತು ಆ ಬಾವಿ.
          
                                               *

 ಅದೇಕೋ ಆ ಬಾವಿಯ ಚಿತ್ರ ರಾಮನಾಥರ ಮನದಿಂದ ಕರಗಲೇ ಇಲ್ಲ. ಪ್ಲೇನ್ ಹತ್ತಿದಾಗಲೂ
 ಅದೇ ದುಗುಡ. ಅದೇ ಯೋಚನೆ. ಸಧ್ಯ, ಏರ್ ಹೋಸ್ಟೆಸ್ ಸೀಟು ತೋರಿಸಿ ಕೈ ಹಿಡಿದು
 ಕೂಡಿಸಿದಳು. ಕಣ್ಣು ಮುಚ್ಚಿ ಕೂತ ಅವರಿಗೆ ಪ್ಲೇನ್ ಟೇಕಾಫ಼್ ಆದಾಗ ಕೊಂಚ ಮನ
 ಹಗುರಾಯಿತು॒
ಆದರೂ ತನಗೆ ಆ ಮನೆ ಮಾರಲು ಅವಸರ ವೇನಿತ್ತು?ತಾನು ತಪ್ಪು ಮಾಡಿದೆನೇ?
ಇದು ನಿನ್ನದೇ ಮನೆ, ನಾನು ನೀನು ಬೇರೇನಾ ಎಂದ ಗಳೆಯ,
ತನ್ನ ಬಗ್ಗೆ, ತಮ್ಮ ಮನೆಯ ಬಗ್ಗೆ ಅಷ್ಟೊಂದು ಅಭಿಮಾನವಿಟ್ಟುಕೊಂಡಿದ್ದವನು
ಇಷ್ಟು ಬೇಗ ಮನೆ ಶೂಟಿಂಗಿಗೆ ಬಾಡಿಗೆ ಕೊಟ್ಟು ಬಿಟ್ಟನೇ?ವರ್ಷವೂ ಕಾಯದೆ? ಹುಂ, ಮುಖ್ಯ
ಹಣ ಎಂದರೆ ಹಾಗೇ. ಎಂಥವರನ್ನೂ ಬದಲಾಯಿಸಿಬಿಡುತ್ತೆ. ಇರಲಿ, ಈಗ ಅದು ಅವನ ಮನೆ ,
ಅವನು ಏನು ಬೇಕಾದರೂ ಮಾಡಿಕೊಳ್ಳಲಿ, ಅದು ಅವನ ಹಕ್ಕು. ಊರಿಗೆ ಹೋದ ತಕ್ಷಣ ತನಗೆ
ಆಪ್ತವಾಗಿದ್ದ ಸಾಮಾನುಗಳನ್ನೆಲ್ಲಾ ತುಂಬಿಸಿಟ್ಟಿದ್ದ ಆ ಟ್ರಂಕು ಹೊರಗೆ ತಂದು ಬಿಡಬೇಕು.
ಅದ್ಯಾಕೆ ಅಲ್ಲಿರಬೇಕು.  ಎಷ್ಟಾದರೂ ಅದು ಈಗ ಬೇರೆಯವರ ಮನೆ. ಅದೂ ಅವರಿಗೆ
ಭಾರವೆನಿಸುತ್ತಿರಬಹುದು. ಯಾರಿಗೆ ಬೇಕು ಬೇರೆಯವರ ಜವಾಬ್ದಾರಿ. ರಾಮನಾಥ
ಯಾವಾಗ ನಿದ್ದೆ ಹೋದರೋ ಗೊತ್ತಿಲ್ಲ. ಲಂಡನ್ ನಲ್ಲಿ ಇಳಿದು,ಸ್ವಲ್ಪ ಹೊತ್ತು
ಕಾಲು ಚಾಚಿ ಕೂತು ಸುಧಾರಿಸಿಕೊಂಡು, ಬಿಸಿ ಬಿಸಿ ಕಾಫಿ ಕುಡಿದು ಮತ್ತೆ ಬೇರೆ ಪ್ಲೇನ್
ಹತ್ತಿದ್ದಾಯಿತು. ಯಾಂತ್ರಿಕವಾಗಿ ಅನೌನ್ಸ್ ಮೆಂಟುಗಳನ್ನು ಕೇಳುತ್ತಾ, ಅದರಂತೆ ಮಾಡುತ್ತಾ
ಹೋದ ದೇಹಕ್ಕೆ  ಪ್ಲೇನ್ ಹತ್ತಿ ತನ್ನ ಸೀಟಿನ ಮೇಲೆ ಕೂತಾಗ ಸ್ವಲ್ಪ ಆರಾಮ. ಸಧ್ಯ ಇನ್ನು
ಬೆಂಗಳೂರು ತಲಪುವ ವರೆಗೂ ಏನೂ ಆತಂಕವಿಲ್ಲ. ಪಕ್ಕದ ಸೀಟು ಖಾಲಿ ಇದ್ದಿದ್ದರಿಂದ
ಸ್ವಲ್ಪ ಅರಾಮಾಗಿ ಕೈಕಾಲು ಸಡಿಲ ಮಾಡಿಕೂತು ಕೊಂಡರು.

                                   *
ಬೆಂಗಳೂರು ಏರ್ ಪೋರ್ಟಿನಲ್ಲಿ ಎಲ್ಲಾ ಫ಼ಾರ್ಮಾಲಿಟೀಸ್ ಮುಗಿಸಿ ಸಾಮಾನು
ಟ್ರಾಲಿ ಯಲ್ಲಿ ನಿಧಾನವಾಗಿ ತಳ್ಳಿಕೊಂಡು ಹೊರಗೆ ಬಂದಾಗ ಎದುರಿಗೇ ಕೃಷ್ಣ
ನಿಂತಿದ್ದ. ಕೃಷ್ಣ ರಾಮನಾಥರ ತಮ್ಮ. ಆದರೆ ಅವರ ನಡುವೆ ಹತ್ತು ವರ್ಷಗಳ ಅಂತರ
ವಿದ್ದಿದ್ದರಿಂದ  ತುಂಬಾ ಚಿಕ್ಕವನಂತೆ ಕಾಣುತ್ತಿದ್ದ. ರಾಮನಾಥರ ಕಂಡರೂ ತಂದೆಯ ಸಮಾನ
ಎಂಬ ಭಾವ. ಗೌರವ. ತುಂಬಾ ಪ್ರೀತಿಯಿದ್ದರೂ ಸಲುಗೆಯಿ. ’ಹೇಗಿತ್ತು ಪ್ರಯಾಣ’ ಎನ್ನುತ್ತಲೇ ಸೂಟ್ ಕೇಸುಗಳನ್ನು
ಕಾರಿನಲ್ಲಿಟ್ಟ. ’ತುಂಬಾ ಆಯಾಸವಾಗಿರಬೇಕು’ ಎಂದು ಕಳಕಳಿಯಿಂದ ಕೇಳಿದ.
ಮನೆ ತಲಪೋಕೆ ಸುಮಾರು ಇನ್ನೂ ಎರಡು ಗಂಟೆಯಾದರೂ ಆಗುತ್ತೆ, ಸ್ವಲ್ಪ ಕಾಫಿ
ತಗೋತೀರಾ ಎಂದು ವಿಚಾರಿಸಿದ. ’ಏನೂ ಬೇಡ. ಕೂತು ಕೂತು ಹೊಟ್ಟೆ ತುಂಬಿದಂತೆಯೇ
ಇದೆ.ಎಂದು ರಾಮನಾಥ ನಕ್ಕರು. ’ ವಿಮಲಾ, ಚಿನ್ನು ಎಲ್ಲಾ ಚೆನ್ನಾಗಿದ್ದಾರಾ’ಎಂದು
ವಿಚಾರಿಸಿಕೊಂಡರು. ಕಾರು ಮನೆಯತ್ತ ಸಾಗಿತು.


                                    *

ಮನೆಗೆ ಬಂದಿಳಿದಾಗ ಸ್ನಾನಕ್ಕೆ ಬಿಸಿಬಿಸಿ ನೀರು. ಅವರಿಗಾಗಿಯೀ ಸುಸಜ್ಜಿತ ರೂಮು,
ಒಳ್ಳೆ ಊಟ ಎಲ್ಲ ಕಾದಿತ್ತು. ಮೊದಲ ಬಾರಿ ಅಮೆರಿಕಾದಿಂದ ಒಂಟಿ ಬಂದಿಳಿದ ಭಾವನನ್ನು ನೋದಿದಾಗ
 ವಿಮಲಾಗೆ ಸಂಕಟವಾಯಿತು. ’ಬೇಗ ಬೇಗ ಸ್ನಾನ ಮುಗಿಸಿ, ಊಟ ಮಾಡಿ ನಿದ್ದೆ ಮಾಡಿ.
ಆಯಾಸವಾಗಿರುತ್ತೆ. ಜೊತೆಗೆ ಜೆಟ್ ಲ್ಯಾಗ್ ಬೇರೆ’ಎಂದು ಕೃಷ್ಣ ಹೇಳಿದಾಗ ’ಅದು ನಿಜವೇ’
ಎಂದು ಅನ್ನಿಸಿ ರಾಮನಾಥ ಏನೂ ಮಾತನಾಡಲಿಲ್ಲ. ಊಟ ಹೆಚ್ಚು ಮಾತಿಲ್ಲದೆ ಸಾಗಿತು.
ಅಚ್ಚ ಭಾರತೀಯ ರುಚಿಯ ಸಾರು, ಪಲ್ಯ ತಿಂದು ’ಕೊನೆಗೆ ಮನೆ ಊಟ ಮಾಡಿದಂತಾಯಿತು.
ರುಚಿಯಾಗಿದೆ ಸಾರು, ಇನ್ನಷ್ಟು ಹಾಕಿಬಿಡು’ ಎಂದಾಗ ವಿಮಲಾ ಖುಶಿಯಾದಳು.
ಅಲ್ಲಿ ವಿನೀತನ ಹೆಂಡತಿ ಸುರಭಿ ಚೆನ್ನಾಗಿಯೇ ಅಡಿಗೆ ಮಾಡುತ್ತಿದ್ದಳು. ಆದರೆ ಏನೇ
ಆದರೂ ಅಲ್ಲಿನ ಎಣ್ಣೆ, ಪದಾರ್ಥಗಳು , ತರಕಾರಿ ಏನೋ ಬೇರೆಯೇ ಅನ್ನಿಸಿ ’ನೋಡು,
ವಿನೀತ್, ಇಲ್ಲಿ ಎಲ್ಲ ಎಷ್ಟು ರುಚಿಯಾಗಿದ್ದರೂ ಆ ಸಿಂಥಟಿಕ್ ಅಮೆರಿಕನ್ ಫ಼್ಲೇವರ್
ಅವನ್ನು ಬಿಡುವುದಿಲ್ಲ’ಎಂದು ಚುಡಾಯಿಸುತ್ತಿದ್ದರು. ಅದು ಮನೆಯಲ್ಲಿ ಒಂದು ದೊಡ್ಡ
ಜೋಕಾಗಿ ಬಿಟ್ಟಿತ್ತು. ಊಟ ಮುಗಿಸಿದವರೇ ಎಲ್ಲರಿಗೂ ಗುಡ್ನೈಟ್ ಹೇಳಿ ತಮ್ಮ
ರೂಮಿಗೆ ಹೋದರು. ಹಾಸಿಗೆಯ ಮೇಲೆ ಅಡ್ಡಾದಾಗ ಮತ್ತೆ ಶೀಲಾ ಕಾಡತೊಡಗಿದಳು.
ಆದರೆ ನುಗ್ಗಿ ಬಂದ ನಿದ್ದೆ ಅವರ ಎಲ್ಲಾ ದುಗುಡಗಳನ್ನು ಅಳಿಸಿ ಹಾಕಿತು.

                                 *

ಮಾರನೆಯ ದಿನ ಬೆಳಗಾಗೆದ್ದು ಕಾಫಿ ತಿಂಡಿ  ಆಗುತ್ತಲೇ ರಾಮನಾಥ ಟಿಪ್ಟಾಪಾಗಿ
ತಯಾರಾಗಿದ್ದನ್ನು ನೋಡಿ ಕೃಷ್ಣನಿಗೆ  ಆಶ್ಚರ್ಯವಾಯಿತು. ಇನ್ನು ನಿನ್ನೆ ತಾನೇ
ಅಷ್ಟು ದೂರದ ಪ್ರಯಾಣ ಮಾಡಿ ಬಂದಿದ್ದಾರೆ, ಜೆಟ್ ಲ್ಯಾಗ್ ಇರುತ್ತೆ, ಎಲ್ಲಿಗೆ
ಹೊರಟರೆಂದು ಅಸಮಾಧಾನವೂ ಆಯಿತು. ಇದನ್ನು ಗ್ರಹಿಸಿದಂತೆ ರಾಮನಾಥ
’ಹೋಗಿ ಒಂದು ಬಾರಿ ನಮ್ಮನೆ ನೋಡಿಕೊಂಡು ಬಂದು ಬಿಡ್ತೀನಿ..’ಎಂದರು.
 ಇನ್ನೆಲ್ಲಿ ’ನಮ್ಮ ಮನೆ’? ಕೃಷ್ಣ ಅವರಿಗೆ ನೋವು ಮಾಡಬಾರದೆಂದು ಸುಮ್ಮನಿದ್ದ.
’ಅದು ನನ್ನ ಟ್ರಂಕ್ ಇಟ್ಟಿದ್ದೀನಲ್ಲಾ ಅವರಿಗೂ ತೊಂದರೆ. ಜವಾಬ್ದಾರಿ. ಬೇಗ ತಂದು ಇಲ್ಲಿ
ಇಡಿಸಿಕೊಂದು ಬಿಟ್ಟರೆ ಮನಸ್ಸಿಗೆ ಸಮಾಧಾನ.॒ನೋಡಿ ಬರ್ತೀನಿ’॒
ಏನೋ ಹೆಳಲು ಹೋದ ಕೃಷ್ಣ ಸುಮ್ಮನಾಗಿ ತಲೆ ಬಗ್ಗಿಸಿದ.
ಆಗಲೇ ರಾಮನಾಥ ಗೇಟು ತೆಗೆದು ಆಟೊ ನಿಲ್ಲಿಸಿ ಆಗಿತ್ತು. ನಾನೇ ಕಾರಿನಲ್ಲಿ ಕರೆದು
ಕೊಂಡು ಹೋಗ್ತೀನಿ ಅಂತ ಹೇಳುವುದಕ್ಕೂ ಅವಕಾಶ ಕೊಡಲಿಲ್ಲವಲ್ಲಾ, ಏನೋ
ಒಬ್ಬರೇ ಹೋಗಬೇಕೆನಿಸಿತೇನೋ.

                                    *

ಆಟೋ ಡ್ರೈವರ್ ಗೆ ’ಬಸವನಗುಡಿ’ ಎಂದವರೇ ’ನಡಿ ಅಲ್ಲಿ ನಾನು ಯಾವ ರಸ್ತೆ ಅಂತ
ಡೈರೆಕ್ಶನ್ ಹೇಳ್ತೀನಿ’ ಎಂದರು.  ಜೆಪಿ ನಗರದ ಮಿನಿ ಫ಼ಾರೆಸ್ಟ್ ನಿಂದ ಭಯಂಕರ
ಟ್ರಾಫ಼ಿಕ್ ನಡುವೆ ಕರ್ಕಶ ಧ್ವನಿ ಮಾಡುತ್ತಾ ಆಟೋ ತೆವಳ ತೊಡಗಿತು. ಓಕ್ ಪಾರ್ಕಿನ
ಮೌನಕ್ಕೆ ಹೊಂದಿಕೊಂದಿದ್ದ ಮನಸ್ಸಿಗೆ ಕಿರಿಕಿರಿಯಾಗತೊಡಗಿತು. ಆದರೆ ತಮ್ಮೂರು,
ತಮ್ಮ ಜನ, ಕನ್ನಡ ಮಾತು, ಕನ್ನಡ ಪೋಸ್ಟರುಗ್‌ಳು, ಹಿಂದಿನ ಸ್ಪೀಕರಿನಿಂದ ಬರುತ್ತಿದ್ದ
ಕನ್ನಡ ಹಾಡು ಎಲ್ಲಾ ವಿಚಿತ್ರ ನೆಮ್ಮದಿ, ಖುಶಿ ತಂದುವು. ಮೊದಲಿಂದ ಪರಿಚಯವಿದ್ದ
ರಸ್ತೆಗಳಲ್ಲಿ ಆಟೋ ಓಡುತ್ತಿದ್ದಾಂತೆ ಎದುರಾದ ಫ಼್ಲೈ ಓವರ್ ಗಳು, ಕಡಿದ ಮರಗಳು,
ಮೆಟ್ರೋ ಕಂಬಗಳು ಕಟ್ಟಿ ಉಳಿದ ಅವಶೇಷಗಳು, ರಾಶಿ ರಾಶಿ ಕಸ ಎಲ್ಲ ಬೆಂಗಳೂರನ್ನು
ಬದಲಾಯಿಸಿದೆ ಎನ್ನಿಸಿ ಬೇಸರವಾಯಿತು.  ಬಸವನಗುಡಿಯ ತಮ್ಮ ಮನೆ ಹತ್ತಿರ ಬರುತ್ತಿದ್ದಂತೆ
ಫಲಕಗಳೂ ಕಿತ್ತು ಹೋಗಿ, ಗಲ್ಲಿಗಳಂತೆ ಕಾಣಿಸುತ್ತಿದ್ದ ರಸ್ತೆಗಳಲ್ಲಿ ಎಲ್ಲಿ ತಿರುಗಬೇಕೆಂಬುದೂ
ತಿಳಿಯದೆ ಗಲಿಬಿಲಿಯಾಯಿತು. ಡ್ರೈವರ್ ’ಇಲ್ಲಾ ಸರ್’ ಎಂದು ಮತ್ತೆ ಮತ್ತೆ ಕೇಳಿದಾಗ
ಇವರು ಹೂಂ ಗುಟ್ಟಿ
ಪಕ್ಕ ಪಕ್ಕ ಹಾದು ಹೋಗುತ್ತಿದ್ದ ಎರಡು ರಸ್ತೆಗಳಲ್ಲಿ ತಪ್ಪಾಗಿ ತಿರುಗಿಸಿ ಅವನ ಕಿರಿಕಿರಿಗೂ
ಗುರಿಯಾಗಿ ಕೊನೆಗೆ ಮೂರನೇ ರಸ್ತೆಯಲ್ಲಿ ತಮ್ಮ ಮನೆ ಕಣ್ಣಿಗೆ ಬಿದ್ದಾಗ ಸಮಾಧಾನವಾಯಿತು.. ಅದೂ
ಅಕ್ಕಪಕ್ಕದಮನೆಗಳು ಮೂರು ಮಹಡಿಯ ಅಪಾರ್ಟ್ ಮೆಂಟುಗಳಾಗಿಬಿಟ್ಟಿದ್ದರಿಂದ ಮಧ್ಯೆ
ಸಂಕೋಚದಿಂದಲೋ ಎಂಬಂತೆ ಹುದುಗಿ ಕೂತಿದ್ದ ಮನೆ. ಹಳೇ ಮಾಸಲು ಸುಣ್ಣ, ಹಸಿರು ಬಣ್ಣದ ಕಿಟಕಿ ಬಾಗಿಲುಗಳ
ತಮ್ಮ ವಿಶಾಲಮನೆ ಏಕೋ ಪುಟ್ಟದಾದಂತೆನಿಸಿ ಖೇದವಾಯಿತು. ಆಟೋದಿಂದ ಇಳಿದು ದುಡ್ಡು ಕೊಟ್ಟಾಗ
ಡ್ರೈವರ್ ’ಅಯ್ಯೋ, ಸುಮ್ಮನೆ ಸುತ್ತಿಸಿದಿರಿ.  ಶೂಟಿಂಗ್ ಮನೆ ಅಂದಿದ್ರೆ ಸೀದಾ ಕರೆದು
ಕೊಂಡು ಬರ್ತಿದ್ದೆಎಂದ ಕೊಂಕಾಗಿ ನಗುತ್ತಾ. ’ಏನ್ ಮಾತಾಡ್ತಾ ಇದಿ, ಇದು ನಾವು ಇರ್ತಿದ್ದ ಮನೆ’
ಎಂದ ಅವರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಆಟೊ ಸ್ಟಾರ್ಟ್ ಮಾಡಿ ಹೊರಡಿಸಿಬಿಟ್ಟ.
ಏಕೋ ರಾಮನಾಥ ಅಲ್ಲೇ ತಮ್ಮ ಮನೆಯತ್ತ ದಿಟ್ಟಿಸುತ್ತಾ ನಿಂತುಬಿಟ್ಟರು.

                                   *

ಮಾಸಿದ ಹಸಿರು ಗೇಟು ತೆರೆದೇ ಇತ್ತು. ಗೇಟುಗಳನ್ನು ಹಿಡಿದು ನಿಲ್ಲಿಸಿದ್ದ ಗಾರೆ ತರಿದ
ಕಂಬಗಳು. ಅವೆರಡನ್ನು ಮೇಲೆ ಸೇರಿಸಿದ್ದ ಆರ್ಚ್. ಮೊದಲು ಹಬ್ಬಿದ್ದ ಜಾಜಿ ಬಳ್ಳಿ ಒಣಗಿ
ಕರಕಲಾಗಿತ್ತು. ಮನೆಯ ನಾಲ್ಕು ಮಟ್ಟಿಲು, ವೆರಾಂಡಾ.  ತೆಗೆದೇ ಇದ್ದ ಬಾಗಿಲಿನಿಂದ
ಕಾಣುತ್ತಿದ್ದ ಇನ್ನೂ ಚೆನ್ನಾಗೇ ಇದ್ದ ಕೆಂಪು ನೆಲ. ಮೇಲಿನ ಗಾಜು ಹಂಚಿನಿಂದ  ಅದರಮೇಲೆ ಬಿದ್ದು
ಕಣ್ಣು ಕೋರೈಸುವಂತೆ ಮಾಡುತ್ತಿದ್ದ ಒಂದು ಬಿಸಿಲು ಕೋಲು.
ದಿನಾ ಎಷ್ಟೊಂದು ಸಲ, ಕಸ ಬಳಿದು, ಉಜ್ಜಿ,
ಸಾರಿಸಿ ಹೊಳೆಯುವಂತೆ ಇಟ್ಟಿದ್ದ ಕೆಂಪು ನೆಲ. ಐವತ್ತು ವರ್ಷಗಳು ನಡೆದಾಡಿದವರ
ಹೆಜ್ಜೆ ಗುರುತುಗಳು, ಪುಟ್ಟ ಪುಟ್ಟಗೆಜ್ಜೆ ಕಾಲಿನಲ್ಲಿ ಅಂಬೆಗಾಲಿಡುತ್ತಿದ್ದ ವಿನೀತನ ಬಾಯಿಂದ
         ಸುರಿದ ಜೊಲ್ಲು, ಸತ್ಯನಾರಾಯಣ ಪೂಜೆಯ ದಿನ ತುಂಬಿದ  ಅರಿಶಿನ ಕುಂಕುಮ ಹೂವು ತುಳಸಿ
         ಪ್ರಸಾದ ಹಣ್ಣುಗಳ ಪರಿಮಳ, ಮಂತ್ರಘೋಶದ ನಾದ. ಗೋಡೆ ಪೂಜೆ ಮಾಡುತ್ತಿದ್ದ ಭ್ರಮಿತ ತಾತನ
         ಹತಾಶೆಯ ಉಸಿರು, ಶೀಲ ಹಾಕಿದ್ದ ಚೆಂದದ ಕಸೂತಿಯ ಕುಶನ್ ಕವರುಗಳ ಮೋಡಿ. ಅಲ್ಲಿ ಇಲ್ಲಿ
         ಬಿದ್ದಿದ್ದ ಆಟದ ಸಾಮಾನುಗಳು, ಮನೆಗೆ ಬಂದವರು ಕಾಫ಼ಿ ಕುಡಿದಿಟ್ಟ ಲೋಟಗಳು,
         ಅಮ್ಮ, ಶೀಲಾ, ಅಜ್ಜಿಎ॒ಲ್ಲರ ಬಳೆ ಸದ್ದು. ಮಾತಿನ ಕಲರವ. ಮಕ್ಕಳ ಜಗಳ, ಕೂಗಾಟ.
         ಪೀಪಿ ಗಲಾಟೆ.॒ಒಂದೇ, ಎರಡೇ.  ಅಷ್ಟೆಲ್ಲವನ್ನೂ ತನ್ನ ನೆನಪಿನಲ್ಲಿ ಕರಗಿಸಿಕೊಂಡೂ
         ಏನೂ ತಿಳಿಯದಂತೆ  ಮೊದಲಿನಂತೆಯೇ
         ಹೊಳೆಯುತ್ತಿತ್ತು ಆ ಹಾಲಿನ ಕೆಂಪು ನೆಲ.

                                       *

         ಹೊರಗೇ ನಿಂತು ನೋಡಿದಾಗ ಒಂದರ ಹಿಂದೊಂದು ಎಲ್ಲಾ ಬಾಗಿಲುಗಳೂ ತೆರೆದಿದ್ದುವು.
         ಹಾಲಿನಲ್ಲಿ ಮಿರುಗುಟ್ಟುತ್ತಿದ್ದ ಕೆಂಪು ನೆಲ. ಮಧ್ಯೆ ಬೆಳಕು ಚೆಲ್ಲಿದ್ದ ಬಿಸಿಲು ಕೋಲು. ಅದರ ಪ್ರಖರತೆಯಲ್ಲಿ
         ನಡುಮನೆಯಲ್ಲಿ ನೆರಳುಗಳಂತೆ ಓಡಾಡುತ್ತಿದ್ದ ಒಂದಷ್ಟು ಜನ. ಯಾರ ಮುಖವೂ ಕಾಣದು.
         ಅವರೆಲ್ಲಾ ಯಾರು? ಅದರ ತೆರೆದ ಬಾಗಿಲಿನ ಹಿಂದೆ ವಿಶಾಲವಾದ ಹಿತ್ತಿಲು. ಅದರ ಮಧ್ಯೆ
         ನಿಶ್ಚಲವಾಗಿ ನಿಂತಿದ್ದ ಬಾವಿ. ಅದೇ ಬಾವಿ. ಅಮೆರಿಕಾದಲ್ಲಿ ಟಿವಿ ತೆರೆಯ ಮೇಲೆ ಕಂಡು
         ತನಗೆ ಅಷ್ಟೊಂದು ಕಾಡಿದ್ದ ಬಾವಿ. ಅದನ್ನು ದಿಟ್ಟಿಸುತ್ತಲೇ ರಾಮನಾಥ ಅಲ್ಲೇ ನಿಂತರು.
         ತಾನು ಆ ಪೆಟ್ಟಿಗೆ ಬೇಗ ತೆಗೆದುಕೊಂಡು ಹೊರಟು ಬಿಡಬೇಕು. ಸಾಧ್ಯವಾದರೆ ಇವತ್ತೇ.
         ತನ್ನ ಹೃದಯಕ್ಕೆ ಹತ್ತಿರಾದ ಏನೇನೆಲ್ಲಾ ಇತ್ತು ಅದರಲ್ಲಿ. ಮೂರು ತಲೆಮಾರಿನ , ಮಾಸಿದ
         ಕಂದು ಬಣ್ಣದ ಫೋಟೊಗಳು. ಕಟ್ಟು ಹಾಕಿದ ಅವುಗಳೊಳಗೆ
         ಮದುವೆಗಳು, ಮುಂಜಿಗಳು, ನಾಮಕರಣಗಳು, ಷಷ್ಠಿಪೂರ್ತಿಗಳಿಗೆ ಬಂದಿದ್ದ
        ನೆಂಟರು. ಎಷ್ಟು ನಂಟಿತ್ತು ಆಗ. ಅಜ್ಜಿ ಮಾಡಿದ್ದ ಸ್ಯಾಟಿನ್ ರಿಬ್ಬನ್ ಕಸೂತಿಗೆ ಕಟ್ಟು ಹಾಕಿಸಿಟ್ಟ ಕಲಾಕೃತಿಗಳು.
         ತಮ್ಮ ಊರಿಗೆ ವಿದ್ಯುತ್ ಬರುವ ಮೊದಲು ಪ್ರತಿ ಸಂಜೆ ಹಚ್ಚುತ್ತಿದ್ದ ಹಿತ್ತಾಳೆ ದೀಪದ ಕಂಬಗಳು.
        ಅಸಲಿ ಚಿನ್ನದ ಕುಸುರಿ ಕೆಲಸ ಮಾಡಿಸಿ ತಂಜಾವೂರಿನಿಂದಲೇ ತರಿಸಿದ್ದ ಬೆಣ್ಣೆ ಕೃಷ್ಣನ
        ಚಿತ್ರ. ಹಳೆ ಗ್ರಾಮಫೋನ್ ರೆಕಾರ್ಡುಗಳು. ಇಂದಿಗೂ ಅದರಿಂದ ಹೊರಗೆ ಹರಿಯಲು ಸಿದ್ಧವಿದ್ದ
        ’ನಳ ದಮಯಂತಿ’, ’ಶಾಕುಂತಲಾ’ ನಾಟಕಗಳು. ಜೊತೆಗೆ ನಗುವ ರೆಕಾರ್ಡ್, ಚೌಡಯ್ಯನವರ
        ಪಿಟೀಲು, ಅಜ್ಜಿಯ ಪ್ರೀತಿಯ ಸೈಗಲ್ ಹಾಡುಗಳು. ತನ್ನ  ಟೆನಿಸ್ ರಾಕೆಟ್. ತಮ್ಮ ಮದುವೆ ಆಲ್ಬಮ್.
        ದಂತದ ರಾಜ, ರಾಣಿ, ಕಾಲಾಳುಗಳ ಚದುರಂಗ. ಅಮ್ಮ ಬದುಕಿರುವವರೆಗೂ ತಲೆ ಹತ್ತಿರ ಇದ್ದ
        ಅವಳು ಕಳೆದುಕೊಂಡ ೩ ತಿಂಗಳ ಮಗುವಿನ ಫೋಟೋ. ತಾತ ಸ್ವಾತಂತ್ರ್ಯ ಹೋರಾಟದಲ್ಲಿ ನೂಲುತ್ತಿದ್ದ
        ತಕಲಿ. ಅಜ್ಜಿಯ ದಪ್ಪ, ಮೆತ್ತನೆಯ ಖಾದಿ ಸೀರೆಗಳು. ಊರಿಗೆ ಬಂದಿದ್ದ ವಿನೋಬಾ ಭಾವೆ,
        ಗೊಲ್ ವಾಲ್ಕರ್, ಮಿರ್ಜ಼ಾ ಇಸ್ಮೇಲರ ಫೋಟೊಗಳು. ತಮ್ಮ ಮನೆಯ ಮುಂದೆ ನಿಂತಿದ್ದ
        ೧೯೩೯ರ ಮಾಡೆಲ್ ಮಾರಿಸ್ ಕಾರು. ಅದರ ಪಕ್ಕ ಅಪ್ಪ ಅಮ್ಮನೊಡನೆ ಅಜ್ಜಿಯ ತೋಳಿನಲ್ಲಿ ತಾನು.
        ಬಾವಿ ಕಟ್ಟೆ ಪಕ್ಕದಲ್ಲಿ ನಾಚುತ್ತಾ ನಿಂತಿರುವ ಅಮ್ಮ ಏಳು ತಿಂಗಳ ಬಸುರಿ. ಅಂದು ಅವಳಿಗೆ
        ಬಳೆ ತೊಡಿಸುವ ಸಂಭ್ರಮ. ಇಷ್ಟೊಂದು ನೆನಪುಗಳನ್ನು ಹೊತ್ತ ಆ ಪೆಟ್ಟಿಗೆ ಇನ್ನು ಇಲ್ಲಿ ಇರಬಾರದು.
        ಅವರಿಗೆ ಕಣ್ಣು ತುಂಬಿ ಬಂತು.
                                          *
        ಹೊರಗೇ  ನಿಂತು ಮನೆಯೊಳಗಿದ್ದ ಜಗತ್ತನ್ನು ಮತ್ತೆ ಸೃಷ್ಟಿಸುತ್ತಿದ್ದ ರಾಮನಾಥ ಮೆಟ್ಟಿಲು
        ಗಳನ್ನು ಒಂದೊಂದಾಗಿ ಹತ್ತಿ ಕಾಲಿಟ್ಟಾಗ, ಅಲ್ಲಿ ಓಡಾಡುತ್ತಿದ್ದ ನೆರಳುಗಳ ಮುಖ
        ಸ್ಪಷ್ಟವಾಗಿ, ಸುತ್ತಲಿದ್ದ ಲೈಟುಗಳು, ಕ್ಯಾಮರಾ ಮಾನಿಟರ್ ಗಳೂ, ಎಲ್ಲೆಲ್ಲೂ ಹರಡಿದ್ದ
        ವಯರುಗಳು, ಬಣ್ಣ ಹಚ್ಚಿಕೊಂಡು ಮೂಲೆಯಲ್ಲಿ ನಿಂತು  ಮೊಬೈಲ್ ನಲ್ಲಿ ಏನೋ ನೋಡುತ್ತಾ
        ಕಿಲಕಿಲ ನಗುತ್ತಿದ್ದ ಇಬ್ಬರು ಹುಡುಗಿಯರು ಎಲ್ಲಾ ಕಂಡು ಬಂದರು.

        ಬೆಳಕಿನಿಂದ ಒಳಗೆ ಬಂದು ದೃಷ್ಟಿ  ಮತ್ತಷ್ಟು ಹೊಂದಿಸಿಕೊಂಡು ಸುತ್ತಲೂ ನೋಡಿದರು.
        ಎದುರಿಗೆ ಬಾಗಿಲ ಮೇಲೆ ರಾರಾಜಿಸುತ್ತಿದ್ದ ಅಜ್ಜಿ ತಾತನ ಫೋಟೊ ನೋಡಿ
        ಅವರಿಗೆ ಎದೆ ಧಸಕ್ಕೆಂದಿತು. ಇದೇನು ಎಲ್ಲಾ ಖಾಲಿ ಮಾಡಿ ಹೊರಟಿದ್ದೆವಲ್ಲಾ.
        ಸುತ್ತಲೂ ತಿರುಗಿ ನೋಡಿದರೆ ಇನ್ನೂ ದೊಡ್ಡ ಶಾಕ್ ಕಾದಿತ್ತು.
       ಗೋಡೆಯ ತುಂಬಾ ತಮ್ಮ ಟ್ರ್ರಂಕಿನಲ್ಲಿದ್ದ ಪೂರ್ವಜರ ಚಿತ್ರಗಳು. ಎಲ್ಲಿಂದಲೋ ಬಾಡಿಗೆಗೆ ತಂದಿದ್ದ
        ಹಳೇ ಕಾಲದ ಕರಿಮರದ ಕುರ್ಚಿ ಮೇಜುಗಳ ಪಕ್ಕ ತಮ್ಮ ಪುರಾತನ ದೀಪದ ಕಂಬ.
        ಮೂಲೆಯ ಟೇಬಲ್ಲಿನ ಮೇಲೆ ಕಾಣುವಂತೆ ನಳ ದಮಯಂತಿ ರೆಕಾರ್ಡುಗಳು. ಟೀಪಾಯ್
        ಮೇಲೆ ದಂತದ ಚದುರಂಗ.  ಅಲ್ಲೇ ನೆಲದ ಮೇಲೆ ಬಿದ್ದು ಗಾಜು ಸೀಳಿದ್ದ ಫೋಟೋ.
        ಕೈಯ್ಯಲ್ಲೆತ್ತಿಕೊಂಡು ಬೆಳಕಿಗೆ ಹಿಡಿದು ನೋಡಿದಾಗ ಅದರೊಳಗೆ ನಾಚುತ್ತಾ ನಿಂತಿದ್ದ
       ೭ ತಿಂಗಳ ಬಸುರಿ ಅಮ್ಮ.

          ರಾಮನಾಥರ ಮೈ ಉರಿಯ ತೊಡಗಿತು. ತಲೆ ಸುತ್ತುತ್ತಿತ್ತು. ತನಗೆ ಏನಾಗುತ್ತಿದೆಯೆಂದೇ
         ತಿಳಿಯದಾಯಿತು. ನಡಗುತ್ತಿದ್ದ ಧ್ವನಿಯಲ್ಲಿ ’ಏನಾಗ್ತಾ ಇದೆ ಇಲ್ಲಿ?
         ಹೇಳೋರು ಕೇಳೋರು ಯಾರೂ ಇಲ್ಲವೆ. ’ಎಂದು ಘರ್ಜಿಸಿದಾಗ ಒಳಗಿಂದ ಬಂದ
         ಡೈರೆಕ್ಟರ್ ’ಸರ್, ಏನಾಯ್ತು.॒ನೀವು ಯಾರೋ ಗೊತ್ತಾಗಲಿಲ್ಲಾ...’ ಎಂದು ತೊದಲತೊಡಗಿದ.
         ’ಇದು ನನ್ನ ಮನೆ. ಇದನ್ನೆಲ್ಲ ಹೀಗೆ ಅಲಂಕಾರಕ್ಕೆ ಇಟ್ಟವರು ಯಾರು? ನಿಮಗೆ ಪೆಟ್ಟಿಗೆ
          ಮುಟ್ಟಲು ಪರ್ಮಿಶನ್ ಕೊಟ್ಟವರು ಯಾರು?ಎಂದಾಗ ಅವರ ಮೈ ನಡುಗುತ್ತಿತ್ತು.        
             ಏನೂ ಅರ್ಥವಾಗದ ಡೈರೆಕ್ಟರ್’ಒಂದು ನಿಮಿಷ ಸರ್,’  ಎಂದು ಮೊಬೈಲ್ ಎತ್ತಿಕೊಂಡು
         ಪಕ್ಕಕ್ಕೆ ಸರಿದು ’ಇಲ್ಲಿ ಯಾರೊ
         ಬಂದು ಗಲಾಟೆ ಮಾಡ್ತಿದಾರೆ, ನಿಮ್ಮ ಪರ್ಮಿಶನ್ ತಕ್ಕೊಂಡಿದ್ವಲ್ಲಾ ಸರ್॒ ಅಂತೆಲ್ಲಾ
         ಮಾತಾಡಿ ’ಸರ್, ಓನರ್ ಬರ್ತಿದಾರೆ, ಸಮಾಧಾನ ಮಾಡ್ಕೊಳ್ಳಿ,’ ಎಂದು ’ಒಂದು ಕೂಲ್ ಡ್ರಿಂಕ್
         ತಗೊಂಬಾರೋ’ ಎಂದು ಕೂಗಿ ಹಾಕಿದ.

                                           *

         ಅಲ್ಲಿ ನಿಂತಿರುವುದೇ ಹಿಂಸೆ ಎನ್ನಿಸಿ ರಾಮನಾಥರು ನಿಧಾನವಾಗಿ ನಡೆದು ಹಿತ್ತಲ ಕಡೆ
        ಬಂದರು. ಬಾವಿಯ ಪಕ್ಕ ಹಾಕಿದ್ದ ಎರಡು ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಕೂತು, ಕೈಯ್ಯಲ್ಲಿ
         ಸ್ಕ್ರಿಪ್ಟ್ ಹಿಡಿದು ಚರ್ಚೆ ಮಾಡುತ್ತಿದ್ದ ಇಬ್ಬರು ಯುವಕರು ’ಬನ್ನಿ ಸಾರ್,ಕೂತ್ಕೊಳ್ಳಿ’
         ಎನ್ನುತ್ತಾ ಅಲ್ಲಿಂದ ಎದ್ದು ಹೋದರು. ಕರ್ಚೀಫ಼ಿನಿಂದ ಮುಖ ಒರೆಸಿಕೊಂಡು ಕೂತಾಗ
         ಹಾಲಲ್ಲಿ ಎತ್ತಿಕೊಂಡ,ಗಾಜು ಸೀಳಿದ ಬಸುರಿ ಅಮ್ಮನ ಫೋಟೋ ಇನ್ನೂ  ಅವರ ಕೈಯ್ಯಲ್ಲೇ ಇತ್ತು.
         ಅದನ್ನು ಒಂದು ಸಾರಿ ಕೈಯ್ಯಲ್ಲೇ ಒರೆಸಿ  ತೊಡೆಯ ಮೇಲಿಟ್ಟು ಕೊಂಡು ಕೂತುಕೊಂಡರು.
         ಸ್ವಲ್ಪ ಹೊತ್ತಿನಲ್ಲೇ ಮೂರ್ತಿ ಅವಸರವಾಗಿ ಬರುತ್ತಿರುವುದು ಕಾಣಿಸಿತು. ಹಿತ್ತಲ ಮೇಟ್ಟಿಲು
         ಇಳಿಯುತ್ತಲೇ ಕೈ ಮುಂದೆ ಚಾಚಿ ಬಂದ ಅವರಿಗೆ ರಾಮನಾಥ ಕೈ ಕುಲುಕಲು
         ಮುಂದಾಗಲಿಲ್ಲ. ಪೆಚ್ಚಾದ ಮೂರ್ತಿ ’ಯಾವಾಗ ಬಂದ್ಯೋ,ಏನೊ ಒಂದು ಫೋನಾದ್ರೂ ಮಾಡೋ ದಲ್ವಾ
         ಊರಿಗೆ ಬರ್ತಿದೀನಿ ಅಂತ, ಇದೇನು ಹೀಗೆ ಧಿಡೀರ್ ಅಂತ!’ ಎಂದು ನಗಲು ಪ್ರಯತ್ನಿಸಿದರು.
         ರಾಮನಾಥ ಶೀತಲವಾಗಿ ’ಹೇಳಿದ್ರೆ ಏನು ಮಾಡ್ತಿದ್ದೆ’॒ ಎಂದರು. ಅದರ ಅರ್ಥ  ಗ್ರಹಿಸಿದ
         ಮೂರ್ತಿ ’ಅದೂ.॒ಅದೂ’॒ಎಂದು ತೊದಲಿದರು. ’ನೋಡು, ಈಗಲೇ ಇಲ್ಲಿ ಇಟ್ಟಿರೋ ನನ್ನ
         ಸಾಮಾನೆಲ್ಲಾ ಟ್ರ್ರಂಕಿನಲ್ಲಿ ಪ್ಯಾಕ್ ಮಾಡಿಸು. ನಾನು ತಗೊಂಡು ಹೊರಡ್ತೇನೆ’ಎಂದರು
         ರಾಮನಾಥ. ಅವರ ಧ್ವನಿಯಲ್ಲಿ ಖಚಿತತೆ ಇತ್ತು.

         ಹಿಂದೆ ಇದನ್ನೆಲ್ಲಾ ಕೇಳಿಸಿ ಕೊಳ್ಳುತ್ತಾ ನಿಂತಿದ್ದ ಡೈರೆಕ್ಟರ್ ’ಸರ್, ಒಂದ್ನಿಮಿಶ’ ಎಂದು
          ಮೂರ್ತಿಯವರನ್ನು ಸ್ವಲ್ಪ ದೂರ ಕರೆದುಕೊಂಡು ಹೋದ. ಮೊದಲು ಅಂಗಲಾಚಿಕೆಯಿಂದ
          ಶುರುವಾದ ಅವರ ಮಾತು,ಕೊನೆಗೆ ವಾಗ್ವಾದ, ಬೆದರಿಕೆವರೆಗೂ ತಲುಪಿತು. ಇಷ್ಟೊಂದು ಸೀನ್
          ಶೂಟ್ ಮಾಡಿಬಿಟ್ಟಿದ್ದೀವಲ್ಲಾ, ಮತ್ತೆ ಮಾಡೋದೂಂದ್ರೆ ಹೇಗೆ ಸಾಧ್ಯ, ಎಷ್ಟು ಲಾಸ್
          ಆಗುತ್ತೆ, ಹಾಗೆ ಮಾಡಿದರೂ ಕಂಟಿನ್ಯುಯಿಟಿ ಗತಿ ಏನು ॒ಇಷ್ಟೆಲ್ಲಾ ಇದ್ದವರು ನಮಗೆ ಪರ್ಮಿಶನ್
          ಕೊಡೋಕೆ ಮೊದಲು ಯೋಚಿಸಬೇಕಿತ್ತುಆ॒ ಕಾಲದ  ಆಮ್ಬಿಯನ್ಸ್ ಕ್ರಿಯೇಟ್ ಮಾಡೋದು
          ಸುಲಭಾನ..ಇಂಥಾ ಬೇಕಾರ್ ಅಜ್ಜ, ಅಜ್ಜಿ ಫೋಗಳು, ತಗಡು ಗ್ರಾಂಫೋನ್ ಪ್ಲೇಟ್ಗಳು,
          ತಾಮ್ರದ ಚೊಂಬು ಎಲ್ಲಾ ಸಿಗಬೇಕಾದ್ರೆ ಗುಜರಿಯಿಂದ ಗುಜರಿಗೆ ಅಲೀಬೇಕಷ್ತೆ ॒’

              ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಕೂತಿದ್ದ ರಾಮನಾಥರಿಗೆ ವಿಪರೀತ ಹಿಂಸೆ
          ಯಾಗಿ, ಅಲ್ಲಿ ಕೂಡುವುದೂ ಕಷ್ಟವಾಗತೊಡಗಿತು.   ’ನಂಗೆ ಲೇಟಾಗುತ್ತೆ.
          ಬೇಗ ಪ್ಯಾಕ್ ಮಾಡೋಕೆ ಹೇಳು ’ ಎಂದಾಗ ಮೂರ್ತಿ ಇತ್ತ ಬಂದರು. ಅವರಿಗೆ ಬೆನ್ನು ತಿರುಗಿಸಿ
          ಬಾವಿಯತ್ತ ನಡೆದ ರಾಮನಾಥ ’ಆ ಹುಡುಗರಿಗೆ ಹೇಳಿ ಈ ಬಾವಿಯಿಂದ ಒಂದಿಷ್ಟು
          ತಣ್ಣನೆ ನೀರು ಸೇದಿಸಿ ಕೊಡು.  ಕೊನೇ ಸಲ ಒಂದು ಲೋಟ ನಮ್ಮ ಬಾವಿ ನೀರು
          ಕುಡಿದು ಹೊರಡ್ತೀನಿ’ ಎಂದವರೇ  ಬಾವಿಯ ಹತ್ತಿರ ಬಂದು ಕಟ್ಟೆಗೆ ಒರಗಿ ಮೆಲ್ಲಗೆ ಬಗ್ಗಿ
          ನೋಡಿದರು. ಅವರ ಮನಃಪಟಲದಲ್ಲಿ ಹಿಂದೆಲ್ಲಾ ಬಗ್ಗಿದ ತಕ್ಷಣ ತಮ್ಮ ಪ್ರತಿಬಿಂಬವನ್ನು ಎಸೆಯುತ್ತಿದ್ದ
          ತಿಳಿಯಾದ  ಸ್ತಬ್ಧವಾದ  ನೀರಿನ  ಚಿತ್ರ ಮೂಡಿತ್ತು.

          ಆದರೆ ಅವರಿಗೆ ಅಲ್ಲಿ ಕಂಡದ್ದು ಕೇವಲ ಮೂರು ಅಡಿ ಕೆಳಗೆ ಗಾರೆ ಸಿಮೆಂಟಿನಿಂದ
          ಸೀಲ್ ಮಾಡಿದ್ದ ಬೂದು ಬಣ್ಣದ ತಳ. ಅದರ ಮೇಲೆ ಯಾರೋ ಕುಡಿದೆಸೆದಿದ್ದ
          ಮೂರ್ನಾಲ್ಕು ಖಾಲಿ ಕೋಕ್ ಕ್ಯಾನ್ ಗಳು. ಅಷ್ಟೆ.

          -ಉಮಾ ರಾವ್
           (ವಿಜಯವಾಣಿ ಯುಗಾದಿ ವಿಶೇಷಾಂಕ ೨೦೧೪)