Thursday, April 17, 2014

ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ : ಹೆಣ್ಣು,,ಲೈಂಗಿಕತೆ, ದಾಂಪತ್ಯ ನಿಷ್ಠೆ



  ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ : ಹೆಣ್ಣು,,ಲೈಂಗಿಕತೆ, ದಾಂಪತ್ಯ ನಿಷ್ಠೆ

ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ, ಹೆಚ್ಚಾಗಿ ಮಾತನಾಡಲು
ಇಷ್ಟಪಡದವ ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್
ಬಹುಮಾನ ವಿಜೇತ ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್.
ಆದರೆ, ಅಪರೂಪದ ಈ ಸಂದರ್ಶನದಲ್ಲಿ ಮಾರ್ಕ್ವೆಜ಼್ ತನ್ನ ಆತ್ಮೀಯ
ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ, ಕೊಲಂಬಿಯಾ ಮೂಲದ ಪ್ಲಿನಿಯಾ
ಅಪುಲೆಯೋ ಮೆಂಡೋಜ್ ಜೊತೆ ತನ್ನೆಲ್ಲಾ ವಿಚಾರಗಳನ್ನು, ಪರದಾಟಗಳನ್ನು.
ನೆನಪುಗಳನ್ನು, ಗೀಳುಗಳನ್ನು, ಕನಸುಗಳನ್ನು ಹುಚ್ಚುಗಳನ್ನು  ನಿರಂಬಳವಾಗಿ
ಮುಕ್ತವಾಗಿ ತೆರೆದಿಟ್ಟಿದ್ದಾನೆ. ’ದ ಫ಼್ರೇಗ್ರೆನ್ಸ್ ಆಫ಼್ ಗ್ವಾವಾ’ ಎಂಬ ಪುಸ್ತಕವಾಗಿ
ಪ್ರಕಟವಾಗಿರುವ ಈ ಸಂದರ್ಶನದ ಒಂದು ಭಾಗ ಇಲ್ಲಿದೆ.

ಇವತ್ತು ನಮ್ಮನ್ನು ಅಗಲಿ ಹೋಗಿರುವ ನನ್ನ ಪ್ರೀತಿಯ ಮಾರ್ಕ್ವೆಜ಼್ ಗೆ
ಇದು ನನ್ನ ಶ್ರದ್ಧಾಂಜಲಿ.
  

ಪ್ಲೀನಿಯೋ ಅಪುಲೆಯೋ ಮೆಂಡೋಂಜ಼ಾ: ಹಿಂದೊಮ್ಮೆ, ಒಂದು ಕಾಕ್ಟೇಲ್ ಪಾರ್ಟಿಯಲ್ಲೀಂತ ನೆನಪು, ನಿನಗೆ  ಈ ಜಗತ್ತಿನ ಅತಿ ಸುಂದರ ಹೆಣ್ಣನ್ನು ಭೇಟಿಯಾಗುವ ಅದೃಷ್ಟ ಸಿಕ್ಕಿತ್ತು .  ನಿಮ್ಮಿಬ್ಬರ ನಡುವೆ ಒಂದು ಒಪ್ಪಂದವೂ ಆಗಿತ್ತು.  ಮಾರನೆಯ ದಿನ ನೀನು ಒಂದು ಬ್ಯಾಂಕಿನ ಗೇಟಿನ ಹತ್ತಿರ ಭೇಟಿಯಾಗುವ ಏರ್ಪಾಟು ಮಾಡಿಕೊಂದಿದ್ದೆ. ನೀನು ಸರಿಯಾದ ಸಮಯಕ್ಕೆ ಹೋದೆ. ನೀನು ಮತ್ತು ಜಗತ್ತಿನ ಅತಿಸುಂದರ ಹೆಣ್ಣಿನ ನಡುವೆ ಏನೋ ವಿಶೇಷವಾದಾದ್ದು ನಡೆಯಲಿದೆ ಅನ್ನುವ ಹೊತ್ತಿಗೆ , ನೀನು ಅಲ್ಲಿಂದ ಕಂಬಿ ಕಿತ್ತೆ. ಒಂದು ಮೊಲದಂತೆ. ನೀನೇ ಅಂದು ಕೊಂಡಿದ್ದಂತೆ, ಅವಳು ನಿಜವಾಗಿ ಅಂಥಾ ಸುಂದರಳಾದ ಹೆಣ್ಣಾದ್ದರಿಂದ
ಇದೊಂದು ಸಾಧಾರಣ ಸಂಬಂಧವಂತೂ ಆಗಲು ಸಾಧ್ಯವಿರಲಿಲ್ಲ.  ನಿನ್ನ ಸ್ನೇಹಿತರಿಗೆಲ್ಲ್ಲಾ ಚೆನ್ನಾಗಿ ತಿಳಿದಿರುವಂತೆ , ನಿನಗೆ  ನಿನ್ನ ಮತ್ತು ಮರ್ಸಡೀಜ಼್  ನಡುವಿನ ವೈವಾಹಿಕ ಸಂಬಂಧ ಬದುಕಿನಲ್ಲಿ ಎಲ್ಲಕ್ಕಿಂತಾ ಮುಖ್ಯ. ಹಾಗಾಗಿ ನಿನ್ನ ವೈವಾಹಿಕ ಸುಖಕ್ಕಾಗಿ ಇದು ನೀನು ಮಾಡಿದ ಮಹಾತ್ಯಾಗ ಅಂದು ಕೊಳ್ಳಬಹುದೇ?

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್: ನೀನು ಹೇಳುತ್ತಿರುವ ಈ ಹಳೇ ಕತೆಯಲ್ಲಿ ಒಂದು ತಪ್ಪಿದೆ. ನಾನು ಹಾಗೆ ಮಾಡಿದ್ದಕ್ಕೂ, ನನ್ನ ವೈವಾಹಿಕ ಜೀವನಕ್ಕೂ ಸಂಬಂಧವಿಲ್ಲ.ಈ ರೀತಿಯ ಸಂಬಂಧವನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ನೋಡಿದಾಗ, ಜಗತ್ತಿನ ಅತ್ಯಂತ ಸುಂದರ ಹೆಣ್ಣು ಅತ್ಯಂತ ಆಕರ್ಶಕಳಾಗಿರಬೇಕೆಂದೇನೂ ಇಲ್ಲ.  ಮುಂದೆ ಸೃಷ್ತಿಯಾಗಬಹುದಾದ ಭಾವನಾತ್ಮಕ ಸಮಸ್ಯೆಗಳಿಂದ ಆಗಬಹುದಾದ ನಷ್ಟವನ್ನು ಅವಳ ಚೆಲುವು ತುಂಬಬಲ್ಲುದು ಎಂದು ನನಗೆ ಅನ್ನಿಸಲಿಲ್ಲ. ಇಂತಹ ಸಂಬಂಧಗಳಲ್ಲಿ ಮೊದಲಿಂದಲೇ ’ಆಟದ ನಿಯಮ’ಗಳನ್ನು ಸ್ಪಷ್ಟಪಡಿಸಿ, ಅವುಗಳಲ್ಲಿ ನಂಬಿಕೆ ಇಟ್ಟುಬಿಟ್ಟರೆ ಹೆಂಗಸರು ಯಾವಾಗಲೂ ತುಂಬಾ ನಿಷ್ಠೆ ಯಿಂದ ನಡೆದು ಕೊಳ್ಳುತ್ತಾರೆ ಎನ್ನುವುದನ್ನು ನಾನು ಕಂಡಿದ್ದ್ದೇನೆ.  ಇಂತಹ ನಿಷ್ಠೆ ನಾಶವಾಗುವುದು ಆ ನಿಯಮಗಳಿಂದ ಅಪ್ಪಿ ತಪ್ಪಿ ಆಚೀಚೆ ಹೋದಾಗ.   ಬಹುಶಃ ಪ್ರಪಂಚದ ಅತ್ಯಂತ ಸುಂದರ ಹೆಣ್ಣಿಗೆ ಈ ಜಾಗತಿಕ ಚೆಸ್ ಆಟದ ಬಗ್ಗೆ ಅರಿವಿರಲಿಲ್ಲ, ಹಾಗಾಗಿ ಅವಳು ಅದನ್ನು ಬೇರೆಬೇರೆ ಬಣ್ಣದ ಕಾಯಿಗಳಿಂದ ಆಡಲು ಬಯಸಿದಳು.  ಅಥವಾ , ಅವಳು ನನಗೆ  ಕೊಡಲು ಅವಳಲ್ಲಿದ್ದುದು ಕೇವಲ ಅವಳ ಅಂದಚಂದ, ಬರೀ  ಅದು ನಮ್ಮಿಬ್ಬರ ನಡುವೆ ಸಮರ್ಪಕವಾದ ಸಂಬಂಧ ನಿರ್ಮಿಸಲು ಸಾಲದು ಎಂದು ನನಗನ್ನಿಸಿರಬಹುದು. ಆದ್ದರಿಂದ, ನಾನು ಮಾಡಿದ್ದು ತ್ಯಾಗವೇನೋ ಹೌದು, ಆದರೆ ಅಂಥಾ ಮಹಾತ್ಯಾಗವೇನೂ ಅಲ್ಲ. ಆ ಇಡೀ ಪ್ರಕರಣ ನಡೆದದ್ದು ಒಂದರ್ಧ ಗಂಟೆ ಕಾದಲ್ಲಿ, ಆದರೆ ಅದರ ಪರಿಣಾಮ ಬಹಳ ಮಹತ್ವಪೂರ್ಣವಾದದ್ದನ್ನು ಉಳಿಸಿ ಹೋಗಿತ್ತು- ಕಾರ್ಲೋ ಫೂಂತೇಯ ಒಂದು ಕತೆ.

ಮೆಂ: ನಿನ್ನ ಬದುಕಿನಲ್ಲಿ ಹೆಂಗಸರು ಎಷ್ಟು ಮಹತ್ವ ಪಡೆದಿದ್ದಾರೆ?

ಮಾ: ಹೆಂಗಸರು ನನ್ನ ಬದುಕಿನುದ್ದಕ್ಕ್ಲೂ ಎಷ್ಟು ಮುಖ್ಯ ಪಾತ್ರ ವಹಿಸಿದ್ದಾರೆಂಬುದನ್ನು ತಿಳಿಯದೆ ನನ್ನ ಜೀವನವನ್ನು ನೀನು ಅರ್ಥ ಮಾಡಿಕೊಳ್ಳುವುದೇ ಸಾಧ್ಯವಿಲ್ಲ. ನನ್ನನ್ನು  ಎತ್ತಿ ಆಡಿಸಿ ಬೆಳೆಸಿದ್ದು ನನ್ನ ಅಜ್ಜಿ. ನಮ್ಮ ಮನೆತುಂಬಾ ಇದ್ದ ಚಿಕ್ಕಮ್ಮ, ದೊಡ್ಡಮ್ಮಂದಿರೂ ನನಗೆ ಪ್ರೀತಿ, ಅಕ್ಕರೆಯ ಧಾರೆ ಎರೆದಿದ್ದರು. ನನ್ನ ಜೊತೆ ಇರುತ್ತಿದ್ದ ಕೆಲಸದ ಹುಡುಗಿಯರು ನನ್ನ ಬಾಲ್ಯದ ಎಷ್ಟೊಂದು ಖುಶಿಯ ಕ್ಷಣಗಳಿಗೆ ಕಾರಣರಾಗಿದ್ದರು.  ನನಗೆ ಓದು ಬರಹ ಕಲಿಸಿದಾಕೆ ತುಂಬಾ ಚೆಲುವೆ, ಲಾವಣ್ಯಮಯಿ. ಅವಳನ್ನು ನೋಡಬಹುದೆಂದು ನಾನು  ಶಾಲೆಗೆ ಹೋಗುವುದನ್ನು ಇಷ್ಟಪಡುತ್ತಿದ್ದೆ. ದುಕಿನ ಎಲ್ಲಾ ಗೊಂದಲಗಳ ನಡುವೆ ಉದ್ದಕ್ಕೂ ನನ್ನ  ಕೈ ಹಿಡಿದು ನಡೆಸಿಕೊಂಡುಹೋಗಲು ಯಾವಾಗಲು ಜೊತೆಯಾಗಿ  ಒಬ್ಬ ಹೆಣ್ಣು ಇರುತ್ತಲೇ ಇದ್ದಳು. ಎಂಥಾ ಪರಿಸ್ಥಿತಿಯನ್ನೂ  ಗಂಡಸರಿಗಿಂತ ಹೆಂಗಸರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಹೆಂಗಸರ ಜೊತೆಯಿದ್ದಾಗ ನನಗೆ ಅಂಥಾ ಕೆಟ್ಟದ್ದೇನೂ ಆಗಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ.  ಅವರಿಂದ ನನಗೆ ಆ ಸುರಕ್ಷಾ ಭಾವ ಸಿಗುತ್ತದೆ. ಆದ್ದರಿಂದಲೇ ನಾನು ಗಂಡಸರಿಗಿಂತ ಹೆಂಗಸರೊಡನೆ  ಆರಾಮಾಗಿ ಇರಬಲ್ಲೆ ಅನ್ನಿಸುತ್ತದೆ.

ಮೆಂ: ಹೆಂಗಸರು, ಗಂಡಸರ  ಪಾತ್ರಗಳು ಚಾರಿತ್ರಿಕ ವಾಗಿ ವಿಭಜನೆಯಾಗಿರುವ ಬಗ್ಗೆ ನಿನ್ನ ವಿಚಾರಗಳು ಎಲ್ಲಿಂದ ರೂಪು ಗೊಳ್ಳುತ್ತವೆ?

ಮಾ: ಬಹುಶಃ ನನ್ನ ಅಜ್ಜಿ ಮನೆಯಲ್ಲಿ ಅಂತರ್ಯುದ್ಧಗಳ ಬಗ್ಗೆ ಕತೆಗಳನ್ನು ಕೇಳುತ್ತಿದ್ದ ಕಾಲದಿಂದ ಇರಬೇಕು. ಹೆಂಗಸರಿಗೆ  ಜಗತ್ತನ್ನು  ನಿರ್ಭಯವಾಗಿ ಎದುರಿಸುವ ಅಂಥಾ ಅಂತಃಶಕ್ತಿ ಇರದಿದ್ದರೆ ಅದೆಲ್ಲಾ ಸಾಧ್ಯವೇ ಆಗುತ್ತಿರಲಿಲ್ಲ ಎನ್ನಿಸುತ್ತಿತ್ತು. ಎಲ್ಲಿಗೆ ಹೋಗುತ್ತಿದ್ದೇವೆಂಬುದನ್ನೂ ತಿಳಿಯದೆ, ಯಾವಾಗ ಮರಳಿಬರುತ್ತೇವೆಂಬ ಅರಿವೂ ಇಲ್ಲದೆ, ಮನೆಯಲ್ಲಿ ಏನಾಗಬಹುದು  ಎಂಬುದನ್ನೂ ಚಿಂತಿಸದೆ ಗಂಡಸರು
ಹೆಗಲಮೇಲೆ ಗನ್ನೆತ್ತಿ ಹಾಕಿಕೊಂಡು ಆಗ ಹೇಗೆ ಹೊರಟು ಬಿಡುತ್ತಿದ್ದರು ಎಂಬುದನ್ನು ನನ್ನಜ್ಜ ನನಗೆ ಹೇಳುತ್ತಿದ್ದರು.. ಕೇವಲ ತಮ್ಮ ಕೆಚ್ಚು ಮತ್ತು ಭಾವನಾಶಕ್ತಿಗಳ ಸಹಾಯದಿಂದ ಹೆಂಗಸರು ಮುಂದಿನ ಪೀಳಿಗೆಯನ್ನು ಬೆಳೆಸಲು ಮನೆಯಲ್ಲೇ ಉಳಿಯುತ್ತಿದ್ದರು. ಯುದ್ಧದಲ್ಲಿ ಹತರಾದ ಗಂಡಸರ ಬದಲು ಹೊಡೆದಾಡಲು ಮತ್ತಷ್ಟು ಹೊಸ ಯೋಧರನ್ನು ಸೃಷ್ಟಿಸುತ್ತಿದ್ದರು. ಹೆಂಗಸರು ತಮ್ಮ ಗಂಡಂದಿರು ಮತ್ತು ಮಕ್ಕಳನ್ನು ಯುದ್ಧಭೂಮಿಗೆ ಕಳಿಸಿಕೊಡುವಾಗ ಗೆದ್ದು ಬಾ, ಇಲ್ಲವೇ ಮಡಿ. ಸೋತು ಮರಳಿ
       ಬರಬೇಡ ಎಂಬ ಮೌನ ಸಂದೇಶ ಅಲ್ಲಿರುತ್ತಿತ್ತು. ಕೆರ್ರಿಬಿಯನ್ ಹೆಂಗಸರ ಈ                 ನಿಲುವೇ ನಂತರ ನಮ ಸಮಾಜದಲ್ಲಿ ಬೇರೂರಿರುವ  ಪುರುಷತ್ವದ (ಮಖಿಸ್ಮೋ) ಪರಿಕಲ್ಪನೆಗೆ ಕಾರಣವಾಯಿತೇನೋ ಎಂದು ನನಗೆ ಒಂದೊಂದು ಸಲ ಅನ್ನಿಸುತ್ತದೆ.

ಮೆಂ: ನೀನು ಮೊದಲ ಸಲ ಹೆಣ್ಣೊಬ್ಬಳ ಆಕರ್ಷಣೆಗೆ ಒಳಗಾಗಿದ್ದು ಯಾವಾಗ ಎಂದು ನೆನಪಿದೆಯೇ?

ಮಾ: ನಾನಾಗಲೇ ಹೇಳಿದಂತೆ ನನ್ನನ್ನು ಮೊದಲು ಆಕರ್ಷಿಸಿದ್ದು ನನಗೆ ಓದು, ಬರಹ ಕಲಿಸಿದ ನನ್ನ ಟೀಚರ್. ಆಗ ನನಗೆ ಐದು ವರ್ಷ. ಆದರೆ ಅದು ಬೇರೆ ತರಹ. ನಿಜವಾಗಿಯೂ ನನ್ನಲ್ಲಿ ಉನ್ಮಾದ ಹುಟ್ಟಿಸಿದ್ದು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗಿ. ಒಂದು ದಿನ ರಾತ್ರಿ ಪಕ್ಕದ ಮನೆಯಲ್ಲಿ ಏನೋ ಸಂಗೀತ ಗೋಷ್ಠಿ
      ನಡೆಯುತ್ತಿತ್ತು.  ಆಗ ಅವಳು ಮುಗ್ಧಳಾಗಿ ತನ್ನೊಡನೆ ತೋಟದಲ್ಲಿ ನರ್ತಿಸಲು ನನ್ನನ್ನು ಕರೆದಳು. ನನಗಾಗ ಸುಮಾರು ಆರು ವರ್ಷ ಇದ್ದಿರಬೇಕು. ಅಂದು ಅವಳ ದೇಹದ ಸ್ಪರ್ಶ ನನ್ನಲ್ಲಿ ಹುಟ್ಟಿಸಿದ ಭಾವ ಪ್ರಳಯ ದಿಂದ ನಾನಿನ್ನೂ ಚೇತರಿಸಿಕೊಂಡಿಲ್ಲ. ನಾನು ಇವತ್ತಿನವರೆಗೂ ಅಷ್ಟು ತೀವ್ರತೆಯನ್ನು ಎಂದೂ ಅನುಭವಿಸಿಲ್ಲ.

ಮೆಂ: ಇತ್ತೀಚೆಗೆ ನಿನ್ನನ್ನು ಯಾರು ತುಂಬಾ ಆಕರ್ಷಿಸಿದ್ದಾರೆ?

ಮಾ: ನಿಜ ಹೇಳಬೇಕೆಂದರೆ, ನಿನ್ನೆ ರಾತ್ರಿ ನಾನು ಪ್ಯಾರಿಸ್ಸಿನ ರೆಸ್ಟೋರೆಂಟ್ ಒಂದರಲ್ಲಿ ನಾನು ನೋಡಿದ ಹೆಣ್ಣು. ನನಗೆ ಹೀಗೆ ಮತ್ತೆ ಮತ್ತೆ ಆಗುತ್ತದೆ. ಹಾಗಾಗಿ ನಾನು ಎಣಿಸುವುದನ್ನೇ ನಿಲ್ಲಿಸಿದ್ದೇನೆ. ನನಗೊಂದು ವಿಚಿತ್ರವಾದ ಸಹಜ ಪ್ರವೃತ್ತಿ ಇದೆ. ನಾನೊಂದು ಗುಂಪು ಜನರ ನಡುವೆ ನಡೆದು ಹೋದಾಗ , ಯಾವುದೋ ಒಂದು ನಿಗೂಢ ಸಂಕೇತ ನನ್ನ ದೃಷ್ಟಿಯನ್ನು  ಅಲ್ಲಿರುವ ಅತ್ಯಂತ ಕುತೂಹಲಕಾರಿ ಹೆಣ್ಣಿನತ್ತ ಕೊಂಡು ಒಯ್ಯುತ್ತದೆ. ಅವಳು ಅಲ್ಲಿರುವ ಎಲ್ಲರಿಗಿಂತ ಚೆಲುವೆಯಿಂದಿರಬೇಕೆಂದೇನಲ್ಲ, ನನಗರಿವಿಲ್ಲದೆಯೇ ಅವಳತ್ತ ನಾನು ಆಕರ್ಷಿತನಾಗುತ್ತೇನೆ.  ಆದರೆ ನಾನೆಂದೂ ಅದರ ಬಗ್ಗೆ  ಏನೂ ಮಾಡುವುದಿಲ್ಲ. ಅವಳಲ್ಲಿದ್ದಾಳೆ ಎಂಬ ಅರಿವಿದ್ದರೆ ಸಾಕು, ನಾನು ಖುಶಿಯಾಗುತ್ತೇನೆ. ಇದೊಂದು ರೀತಿಯ ನಿರ್ಮಲ ಸುಂದರ ಭಾವನೆ, ಒಂದೊಂದು ಸಲ ಮರ್ಸಡೀಜ಼್ ಕೂಡಾ ನನಗೆ ಅಂಥಾ ಹೆಣ್ಣನ್ನು ಹುಡುಕಿಕೊಳ್ಳಲು ಸಹಾಯ ಮಡುತ್ತಾಳೆ, ಅವಳನ್ನು ನೋಡಲು ಅನುಕೂಲವಾದ ಸ್ಥಳ ಆರಿಸಿ ಕೊಡುತ್ತಾಳೆ.

ಮೆಂ: ಲೈಂಗಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ಏನಾದರೂ ಮಿತಿಗಳಿರಬೇಕು ಎಂದು ನಿನಗೆ ಅನ್ನಿಸುತ್ತದೆಯೇ? ಅವುಗಳು ಏನು?

ಮಾ: ನಾವೆಲ್ಲ ನಮ್ಮ ನಮ್ಮ ಪೂರ್ವಾಗ್ರಹಗಳಿಗೆ ಕಟ್ಟುಬಿದ್ದೇ ಇರುತ್ತೇವೆ. ಮುಕ್ತಚಿಂತಕನಾಗಿ , ನನಗನ್ನಿಸುವುದೆಂದರೆ ಸೈದ್ಧಾಂತಿಕವಾಗಿ ಲೈಂಗಿಕ ಸ್ವಾತಂತ್ರ್ಯದ ಮೇಲೆ ಯಾವ ಕಟ್ಟು ಪಾಡುಗಳೂ ಇರಬಾರದೆಂದು. ಆದರೆ ನಿಜಜೀವನದಲ್ಲಿ ನಾನು ನನ್ನ ಕ್ಯಾಥೊಲಿಕ್ ಹಿನ್ನೆಲೆ ಮತ್ತು ಬೂರ್ಝ್ವಾ ಸಮಾಜದ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ, ನಮ್ಮಲ್ಲಿ ತುಂಬಾ ಜನರಿಗೆ ಆಗುವಂತೆ ನಾನೂ ಡಬಲ್ ಸ್ಟ್ಯಾಂಡರ್ಡ್ಸ್ ಗೆ ಬಲಿಯಾಗಿದ್ದೇನೆ

ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ಼್ ನೊಂದಿಗೆ ಸಂದರ್ಶನದ ಭಾಗಗಳು: ಪ್ಲಿನಿಯೋ ಅಪುಲೆಯೋ  ಮೆಂಡೊಂಜ಼ಾ
       ಕನ್ನಡಕ್ಕೆ: ಉಮಾ ರಾವ್
(ಕೆಂಡಸಂಪಿಗೆ ೨೦೦೯)


      


ಸಂಜೆಗತ್ತಲಿನ ಮನುಷ್ಯರು; ತೃತೀಯ ಲಿಂಗಿಗಳಿಗೆ ಕೊನೆಗೂ ಸಿಕ್ಕ ನ್ಯಾಯ



ಸಂಜೆಗತ್ತಲಿನ ಮನುಷ್ಯರು
“ಇಂದು ನನ್ನನ್ನು ಜನ ‘ಹೋಮೋ’ ಎಂದು ಕರೀತಾರೆ. ಆದರೆ ಈಗ ನಾನೀ ಪದ ಕೇಳಿದಾಗ ಬೆಚ್ಚುವುದಿಲ್ಲ. ತತ್ತರಿಸುವುದಿಲ್ಲ. ಚಿಕ್ಕಂದಿನಿಂದ ಹೀಗೇ ಏನೇನೋ ಕರೆಸಿಕೊಂಡು ಅಭ್ಯಾಸವಾಗಿಹೋಗಿದೆ. ನಾನು ತುಂಬಾ ಚಿಕ್ಕವನಿದ್ದಾಗ, ಮನೆಗೆ ಬರುವ ನೆಂಟರು, ಸ್ನೇಹಿತರು-ನಾನು ಹೆಚ್ಚಾಗಿ ಬೊಂಬೆಗಳ ಜೊತೆಗೇ ಆಟವಾಡುವುದನ್ನು ಕಂಡು, ಗೋಲಿ, ಬುಗುರಿ, ಓಟ, ಈಜುಗಳಿಂದ ದೂರ ಇರುವುದನ್ನು ಕಂಡು, ಪ್ರಸಿದ್ಧ ಪೈಲ್‌ವಾನ್ ಆಗಿದ್ದ ನನ್ನ ಅಜ್ಜನ “ಗಂಡುತನ” ತೋರಿಸದಿದ್ದನ್ನು ಕಂಡು, ನನ್ನನ್ನು “ಬಾಯ್‌ಲೋ” (ಗುಜರಾತಿಯಲ್ಲಿ ಈ ಪದಕ್ಕೆ ‘ಹುಡುಗಿಯ ಹಾಗೆ’ ಎಂದರ್ಥ) ಎಂದು ಕರೀತಿದ್ದರು. ಅಂದು ಹಾಗೆ ಪ್ರಾರಂಭವಾಗಿದ್ದು ನಂತರ ಏನೇನೋ ಹೆಸರುಗಳನ್ನು ಕರೆಯಿಸಿಕೊಂಡು ಅಭ್ಯಾಸವಾಗಿಹೋಯಿತು. ಮುಂಬೈ ಹಿಂದಿಯ ‘ಗಾಂಡೂ’ ‘ಛಕ್ಕಾ.’ ಇತ್ತೀಚೆಗೆ ಸಲಿಂಗಕಾಮಿಗಳಲ್ಲಿ ಜನಪ್ರಿಯವಾಗುತ್ತಿರುವ ‘ಗೂಡ್’ (ಬೆಲ್ಲ-ಸಿಹಿ). ಇಂಗ್ಲಿಷಿನ ‘ಗೇ’ ಪದ ನನಗೆ ಪರಿಚಯವಾದದ್ದು ನಾನು ೧೫-೧೬ ವರ್ಷದವನಿದ್ದಾಗ. ಬಂಗಾಲಿಯಲ್ಲಿ ನಮ್ಮನ್ನು “ಸಮಕಾಮಿ”ಗಳೆಂದು ಕರೀತಾರೆ. ತಮ್ಮಂತೆಯೇ ಇರುವವರನ್ನು ಪ್ರೀತಿಸುವವರೆಂದು. ಅದು ಒಳ್ಳೆಯ ಪದ ಅನ್ನಿಸುತ್ತದೆ. ಆದರೆ, ಕೆಲವು ದಕ್ಷಿಣ ಪ್ರಾಂತ್ಯಗಳಲ್ಲಿ ನಮ್ಮನ್ನು “ಈವ್‌ನಿಂಗ್ ಪೀಪಲ್”-ಸಂಜೆಗತ್ತಲಿನ ಮನುಷ್ಯರೆಂದು ಕರೀತಾರೆ. ಇದು ನನಗೆ ತುಂಬಾ ಕಸಿವಿಸಿ ಹುಟ್ಟಿಸಿದ ಹೆಸರು. “ನಮಗೆ ಬೆಳಗಿನ ಸೂರ್ಯನ ಕಿರಣಗಳ ಹಕ್ಕಿಲ್ಲವೇನು...?” ಎಂದು ಕೇಳುತ್ತಾರೆ ಸಲಿಂಗಕಾಮಿಯೊಬ್ಬರು. ತಾವು ತುಳಿದ ನೋವಿನ ಹಾದಿಯನ್ನು ನೆನಪು ಮಾಡಿಕೊಳ್ಳುತ್ತಾ.
ಹೌದು. ಈಗ ಜಗತ್ತಿನಾದ್ಯಂತ ‘ಗೇ’ ಎಂದರೆ ಖುಷಿಯಲ್ಲ. ಪ್ಯಾನ್ಸಿ ಒಂದು ಹೂವು ಅಲ್ಲ. ಇದು ಸಲಿಂಗಕಾಮಿಗಳನ್ನು ಕರೆಯುವ ಹಲವಾರು ಬಗೆಗಳಲ್ಲಿ ಕೆಲವು. ಇತ್ತೀಚೆಗೆ ಇವರು ಸುದ್ದಿಯಲ್ಲಿದ್ದಾರೆ. ನೆರಳಿನಿಂದ ಬೆಳಕಿಗೆ ಬರುವ ಧೈರ್ಯ ಮಾಡಿದ್ದಾರೆ. ‘ನಾವಿರುವುದೇ ಹೀಗೆ’ ಎನ್ನುವುದನ್ನು ಗುರುತಿಸಿಕೊಂಡು, ಅದರ ಬಗ್ಗೆ ಹಿಂಸೆಪಡುವ ಅವಶ್ಯಕತೆಯಿಲ್ಲವೆಂಬುದನ್ನು ಕಂಡುಕೊಂಡಿದ್ದಾರೆ.

ಬಾಂಬೇ ದೋಸ್ತ್
ಭಾರತದ ಸಾಂಪ್ರದಾಯಿಕತೆಯ ಮಧ್ಯೆಯೂ ದಿಟ್ಟತನದಿಂದ ಹೊರಬಂದು, ತಮ್ಮ ಬಳಗದವರಿಗೆ ಗೆಳೆತನದ ಹಸ್ತ ಚಾಚಿ ನೆರವಾಗಲು ಮುಂದಾದವರು ಮುಂಬೈನ ಅಶೋಕ್ ರಾವ್ ಕವಿ. ತನ್ನ ಮಗ ಸಲಿಂಗಕಾಮಿಯೆಂದು ತಿಳಿದರೆ ಆಘಾತದಿಂದ ತತ್ತರಿಸುವ ತಾಯಿಯರಿರುವ ನಮ್ಮ ದೇಶದ ಪರಿಸ್ಥಿತಿಯಲ್ಲಿ, ಇವರು ಇಟ್ಟದ್ದು ದಿಟ್ಟಹೆಜ್ಜೆಯೇ ಸರಿ. ಅವರ ಎಲ್ಲ ರೀತಿಯ ಸಮಸ್ಯೆಗಳ ಬಗ್ಗೆ ಸಲಹೆಗಳು, ಸ್ವಾರಸ್ಯಕರ ಲೇಖನಗಳು, ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು, ವಿಶೇಷ ಚರ್ಚಾಕೂಟಗಳು-ಸಭೆಗಳು-ಪಿಕ್‌ನಿಕ್‌ಗಳ ಬಗ್ಗೆ ವಿವರಗಳನ್ನು ಹೊತ್ತು, ಒಬ್ಬರಿಗೊಬ್ಬರು ಸಂಪರ್ಕಿಸುವ ಆತ್ಮೀಯ ವೇದಿಕೆಯಾಗಿರುವ, “ಬಾಂಬೇ ದೋಸ್ತ್” ಮ್ಯಾಗಝೀನ್ನ್ನು ಹೊರತಂದಾಗ, ಒಂದು ಚಂಡಮಾರುತವೇ ಹುಟ್ಟಿತು. ಇವರಿಗೆ ಬೆದರಿಕೆಯ ಫೋನ್ ಕಾಲ್‌ಗಳು ಬಂದವು. ಆದರೆ ಇವರು ಹಿಂಜರಿಯಲಿಲ್ಲ. ಭಾರತದಲ್ಲಿರುವ ಲಕ್ಷಾಂತರ ಅನಾಮಿಕ ಸಲಿಂಗಕಾಮಿಗಳಿಗೆ ನೆರವಾಗಲು ಚಟುವಟಿಕೆಗಳನ್ನು ಹಮ್ಮಿಕೊಂಡು, ಅದರಲ್ಲಿ ಸಕ್ರಿಯ ಪಾತ್ರವಹಿಸಿದರು.
ಏಡ್ಸ್ ಹಾವಳಿ ಪ್ರಾರಂಭವಾದಾಗ ಅಶೋಕ್ ರಾವ್ ಕವಿಯವರು ಕಳಕಳಿಯಿಂದ ಮುಂದೆ ಬಂದರು. ಏಡ್ಸ್ ಬಗ್ಗೆ ಹರಡಿರುವ ಅಜ್ಞಾನದ ನಂಬಿಕೆಗಳನ್ನು ದೂರಮಾಡಿ, ಅವರನ್ನು ಆ ರೋಗದಿಂದ ದೂರ, ಸುರಕ್ಷತೆಯಿಂದ ಇರಲು ನೆರವಾಗಲು ಮುಂಬೈನ ಬೇರೆಬೇರೆ ಭಾಗಗಳಲ್ಲಿ ವಿವೇಷ ಕ್ಲಿನಿಕ್‌ಗಳನ್ನು ತೆರೆದರು. ಬಾಂಬೇ ದೋಸ್ತ್‌ನಲ್ಲಿ ಇದರ ಬಗ್ಗೆ ವಿವರವಾದ ಮಾಹಿತಿಗಳನ್ನು ಕೊಟ್ಟರು. ಆಗ ಜನರಿಗೆ ಇವರ ಬಗ್ಗೆ ಗೌರವ ಹುಟ್ಟಿತು.
ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಈ ಪ್ರತಿಭಾಶಾಲಿ, ಒಂದು ರೀತಿಯ ಸಂಶಯ, ಭಯ, ಜುಗುಪ್ಸೆ, ದ್ವೇಷ ಎಲ್ಲ ಭಾವನೆಗಳನ್ನೂ ಒಟ್ಟಿಗೆ ಹುಟ್ಟಿಸುವ ವ್ಯಕ್ತಿ.’ ಇವರು ಈಗ ಜಗದ್ವಿಖ್ಯಾತರು. ಡಿಸೆಂಬರ್ ತಿಂಗಳಲ್ಲಿ ಮುಂಬೈಯಲ್ಲಿ ಇವರು ಒಂದು ಅಂತರರಾಷ್ಟ್ರೀಯ ಕಾನ್‌ಫರೆನ್ಸ್- “ಎಮರ್ಜಿಂಗ್ ಗೇ ಐಡೆಂಟಿಟೀಸ್ ಇನ್ ಸೌತ್ ಏಷಿಯಾ”- ಏರ್ಪಡಿಸಿದ್ದರು. ಜನಸಾಮಾನ್ಯರಿಗೆ ಇದಕ್ಕೆ ಪ್ರವೇಶವಿರಲಿಲ್ಲ. ಇದಕ್ಕೆ ಕೆಲವು ರಾಜಕೀಯ ಪಕ್ಷಗಳಿಂದ, ಸಾಂಪ್ರದಾಯಿಕ ತಂಡಗಳಿಂದ ಸಾಕಷ್ಟು ವಿರೋಧವೂ ಇತ್ತು. ಆದರೆ ಇದಾವುದೂ ಇವರನ್ನು, ಇವರ ತಂಡದವರನ್ನು ತಡೆಯಲಿಲ್ಲ.
ಸಲಿಂಕಾಮಿಗಳು ಘನತೆ, ಗೌರವದಿಂದ ಬಾಳಲು ಶ್ರಮಿಸುತ್ತಿರುವ ಇವರ ಕಾರ್ಯ ಸಫಲವಾಗುತ್ತಿದೆ. ಸಾಮಾಜಿಕವಾಗಿ ಒಪ್ಪಿಗೆ ಪಡೆದ ನಡವಳಿಕೆಯಿಂದ ದೂರವಿರುವವರನ್ನು ಸಮಾಜ ಹೆಚ್ಚು ಸಹಾನುಭೂತಿಯಿಂದ ಒಪ್ಪಿಕೊಳ್ಳುವುದು ಸಾಧ್ಯವಾಗಿದೆ.

ಎಲ್ಲೆಲ್ಲೂ ಹೊಸ ತುಮುಲ
ಈಗ ಅಮೆರಿಕಾದಲ್ಲಿ ಸಾವಿರಾರು ಸಲಿಂಗಕಾಮಿಗಳ ಜೋಡಿಗಳು ಮದುವೆಯಾಗಿದ್ದಾರೆ. ೪ ಲಕ್ಷ ‘ಸೇಮ್ ಸೆಕ್ಸ್ ಕಪಲ್ಸ್’ ಅಲ್ಲಿ ದತ್ತು ತೆಗೆದುಕೊಳ್ಳುವ ಹಕ್ಕಿಗಾಗಿ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಇವರನ್ನು ಮನಸ್ಸಿನಲ್ಲಿಟ್ಟುಕೊಂಡು ಎಡ್‌ವಟೈಸಿಂಗ್ ಕಮಿರ್ಷಿಯಲ್ಸ್ ತಯಾರಾಗುವಷ್ಟು ಅಲ್ಲಿನ ಸಮಾಜ ಇವರನ್ನು ವೇದಿಕೆಗಳನ್ನು ತಯಾರಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನಾವೇನೂ ದೂರ ಉಳಿದಿಲ್ಲ. ಇತ್ತೀಚೆಗೆ ಜಮಖಂಡಿ ತಾಲ್ಲೂಕಿನ ರಾಮಪುರದಲ್ಲಿ ಸಲಿಂಗಕಾಮಿಗಳ ನಡುವೆ ಒಂದು ಮದುವೆ ನಡೆದುಹೋಯಿತು. ಆದರೂ, ಸಲಿಂಕಗಾಮಿಗಳಾದ ತಾಯಿಯರಿಂದ ಮಕ್ಕಳನ್ನು ಎಷ್ಟೋ ದೇಶದ ಸರ್ಕಾರಗಳು ಕಿತ್ತುಕೊಳ್ಳುತ್ತಿವೆ. ಕೆಲವು ಚರ್ಚ್‌ಗಳಂತೂ ಕಟುವಾಗಿ ಸಲಿಂಗಕಾಮಿಗಳನ್ನು ವಿರೋಧಿಸಿವೆ. ಇರಾನ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇವರಿಗೆ ಮರಣದಂಡನೆ ಕೊಡಲಾಗಿದೆ. ಆದರೆ, ಅವರ ಹೋರಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಕೈರೋದಲ್ಲಿ ನಡೆದ “ಯುನೈಟೆಡ್ ನೇಷನ್ಸ್ ಕಾನ್‌ಫರೆನ್ಸ್ ಆನ್ ಪಾಪ್ಯುಲೇಷನ್ಸ್”ನಲ್ಲಿ ಹೆಣ್ಣಿಗೆ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿರುವ ವಿಷಯವನ್ನು ದೃಢಪಡಿಸುವ ಪ್ರಯತ್ನ ನಡೆಯಿತು.

ಒಬ್ಬಳೇ ಹೋಗಬೇಡ!
‘ಬಾಂಬೇ ದೋಸ್ತ್’ ವರ್ಷಗಳ ಹಿಂದೆ ಮೊದಲು ಬಂದಾಗ, ಎಲ್ಲೆಲ್ಲೂ ಅದರ ಬಗ್ಗೆ ಗುಸುಗುಸು ನಡೆಯುತ್ತಿತ್ತು. “ಅದು ಮಾರಾಟಕ್ಕೆ ಸಿಗುವುದಿಲ್ಲವಂತೆ. ಫೈವ್ ಸ್ಟಾರ್ ಹೋಟೆಲ್‌ಗಳ ಟಾಯ್‌ಲೆಟ್‌ಗಳಲ್ಲಿ ಕಂಡೂ ಕಾಣದ ಹಾಗೆ ಇಟ್ಟಿರ‍್ತಾರಂತೆ” ಎಂದೆಲ್ಲ. ಹಾಗೇ ನಿಜವಾಗಿಯೂ ಒಂದು ದಿನ ಅದು ಕಣ್ಣಿಗೆ ಬಿದ್ದಾಗ ಎತ್ತಿಕೊಳ್ಳಲು ಹಿಂಜರಿಕೆಯಾಗಿತ್ತು!
ಮೊನ್ನೆ ‘ಬಾಂಬೇ ದೋಸ್ತ್’ ಕಾಪಿ ಹುಡುಕಿಕೊಂಡು ಹೊರಟಾಗ, ಗೆಳೆಯ-ಗೆಳತಿಯರು “ಅದು ಫೌಂಟನ್ ಸುತ್ತಮುತ್ತ ಎಲ್ಲಾ ಬುಕ್ಸ್-ಮ್ಯಾಗಝೀನ್ ಸೆಲ್ಲರ‍್ಸ್ ಹತ್ತಿರವೂ ಸಿಗುತ್ತೆ” ಎಂದು ಹೇಳಿದರು. “ಆದರೆ ಕೊಳ್ಳಲು ಹೋದಾಗ ಒಬ್ಬಳೇ ಹೋಗಬೇಡ!” ಎಂದು ಎಚ್ಚರಿಸಿದರು.
ಎಷ್ಟೇ ಅಂಗಡಿಗಳು, ಫುಟ್‌ಪಾತಿನ ಮಾರಾಟಗಾರರಲ್ಲಿ ವಿಚಾರಿಸಿದರೂ, ಈಗಿಲ್ಲ, ಮುಂದಿನವಾರ ತರಿಸಿಕೊಡುತ್ತೇನೆ. ಅದು ಪ್ರೈವಟ್ ಸರ್ಕ್ಯುಲೇಷನ್‌ಗೆ ಮಾತ್ರ ಎಂದೆಲ್ಲಾ ಪ್ರತಿಕ್ರಿಯೆಗಳು ಬಂದವು. ಬೆಲೆ ಕೇಳಿದಾಗ “೫೦-೬೦-೭೦- ಪ್ರತಿ ಇಷ್ಯೂ ಮೇಲೆ ಹೋಗುತ್ತೆ” ಎಂದು ಉತ್ತರ.
ಕೊನೆಗೊಬ್ಬ ಪೆಟ್ಟಿಗೆ ಅಂಗಡಿಯವ ತರಿಸಿಕೊಟ್ಟ. ಅದರ ಮೇಲೆ ಪ್ರಿಂಟಾಗಿದ್ದ ೨೦ ರೂ.ಗಳ ಮೇಲೆ ೫೦ ರೂ.ಗಳ ಚೀಟಿ ಅಂಟಿಸಿದ್ದ. “ಪ್ರತಿ ತಿಂಗಳೂ ಬನ್ನಿ ನಾನೇ ತರಿಸಿಕೊಡುತ್ತೇನೆ” ಎಂದು ಹೇಳುತ್ತಾ ೫೦ ರೂಪಾಯಿ ಜೇಬಿಗೆ ಬಿಟ್ಟುಕೊಂಡ.
“ಪ್ರತಿ ತಿಂಗಳೂ ಬೇಡ., ಒಂದು ಲೇಖನ ಬರೆಯುವುದಿತ್ತು. ಅದಕ್ಕೋಸ್ಕರ ಬೇಕಿತ್ತು” ಎಂದು ನಾನು ಅವನಿಗೆ ವಿವರಣೆ ಕೊಟ್ಟಾಗ, ಅದರ ಅವಶ್ಯಕತೆಯಿರಲಿಲ್ಲ ಎಂಬ ಅರಿವು ನಗೆ ತರಿಸಿತು.

(ಲಂಕೇಶ್ ಪತ್ರಿಕೆ, ಫ಼ೆಬ್ರುವರಿ ೧, ೧೯೯೫)

Wednesday, April 9, 2014

ಮೂರ್ತಿಯವರನ್ನು ನೆನೆಯುತ್ತಾ




ವಿ.ಕೆ.ಮೂರ್ತಿಯವರನ್ನು ನೆನೆಯುತ್ತಾ॒


ವಿ.ಕೆ. ಮೂರ್ತಿಯವರು ಇನ್ನಿಲ್ಲ. ಅಗಾಧ ಸಾಧನೆ ಮಾಡಿದರೂ ಸದ್ದಿಲ್ಲದೆ ಶಾಂತ
ರಾಗಿ ಬದುಕಿದ ಮೂರ್ತಿಯವರು, ಹಾಗೇ ಶಾಂತರಾಗಿ ಸದ್ದಿಲ್ಲದೆ ಇಂದು
ಬೆಳಿಗ್ಗೆ ಚಿರನಿದ್ರೆಗೆ ಜಾರಿ ಹೋದರು.
               *                *              *

ನೆರಳು ಬೆಳಕುಗಳಿಂದ ಬೆಳ್ಳಿ ತೆರೆ ಮೇಲೆ ಮಾಂತ್ರಿಕ ಜಗತ್ತನ್ನು ಸೃಷ್ಟಿಸಿದ ಮೂರ್ತಿ
ಯವರನ್ನು ಮೊದಲು ಕಂಡಿದ್ದು ನಾನು ೧೪ ವರ್ಶದವಳಾಗಿದ್ದಾಗ ಮುಂಬೈ
ನೋಡಲು ಹೋಗಿದ್ದಾಗ. ಆಗ ನಾವಿದ್ದ ನಮ್ಮ ಸೋದರತ್ತೆ ಭವಾನಿ ಮನೆಯ ಪಕ್ಕದಲ್ಲೇ
ಇದ್ದು ಅವರಿಗೆ ಆಪ್ತರಾಗಿದ್ದ ಕುಟ್ಟಿ ನಮ್ಮನ್ನು ಶೂಟಿಂಗ್ ತೋರಿಸಲು
ಕರೆದುಕೊಂಡು ಹೋಗಿದ್ದರು.. ಅವರು
ಮನೆಯವರಿಗೆ , ಗೆಳೆಯಗೆಳತಿಯರಿಗೆ, ಮೈಸೂರು ಎಸೋಸಿಯೇಶನ್ನಿನವರಿಗೆಲ್ಲಾ        
ಕುಟ್ಟಿ. ಸಿನೆಮಾ ವಲಯದವರಿಗೆ ಮೂರ್ತಿಸಾಬ್. ಶೂಟಿಂಗ್ ತೋರಿಸಿದ ಅವರು
 ಅಂದು ನಮಗೆ ದೇವರೇ ಆಗಿಬಿಟ್ಟಿದ್ದರು.
ಅದರಲ್ಲಿ ವೈಜಯಂತಿ ಮಾಲಾ ಬೇರೆ ನಟಿಸಿದ್ದಳೆಂದು ನೆನಪು.

                      *             *             *
        
           ಮತ್ತೆ ಅವರನ್ನು ಭೇಟಿಯಾದದ್ದು ಮುಂಬೈ ಮಾತುಂಗಾದ ಮೈಸೂರು
ಎಸೋಸಿಯೇಶನ್ನಿನಲ್ಲಿ. ಎಪ್ಪತ್ತರ ದಶಕದ ಮೊದಲ ಭಾಗ. ಮೂರ್ತಿಯವರು
ಕೀರ್ತಿಯ ಉತ್ತುಂಗದಲ್ಲಿದ್ದ ಸಮಯ. ಅಂದು ಅಸೋಸಿಯೆಶನ್ನಿನಲ್ಲಿ ಅವರೇ
ನಿರ್ದೇಶಿಸಿದ ಹಾಸ್ಯ ನಾಟಕ. ಕಟ್ಟಡದ ಮುಂದಿದ್ದ ಲಾನ್ ನಲ್ಲಿ ಬೆತ್ತದ
ಕುರ್ಚಿಯ ಮೇಲೆ ಸಿಗರೇಟು ಸೇದುತ್ತಾ ಸಂಧ್ಯಾ ಜೊತೆ  ಕುಳಿತಿದ್ದರು. ಬಿಳೀ ಶರಟು, ಬಿಳೀ
ಪ್ಯಾಂಟು ತೆಳ್ಳನೆಯ ವ್ಯಕ್ತಿತ್ವ. ಅವರ ಗೆಳೆಯರೊಬ್ಬರು ಜೋಕ್ ಮಾಡುತ್ತಿದ್ದಂತೆ
ಕುಟ್ಟಿ ಮುಂಬೈ ಮಳೆಯಲ್ಲೂ ಕೊಡೆ ತೆಗೆದುಕೊಂದು ಹೋಗುವುದಿಲ್ಲ,ಏಕೆ ಗೊತ್ತಾ?
ಅವನು ಎರಡು ಹನಿಗಳ ನಡುವೆ ತೂರಿಕೊಂಡು ನಡೀತಾನೆಎಂದು. ಕೊನೆ
ವರೆಗೂ ಅವರು ಹಾಗೇ ಇದ್ದಿದ್ದು ಅವರ ವೈಶಿಷ್ಟ್ಯ.
           ಬ್ಯಾಂಕ್ ಕ್ಲರ್ಕಿನಂತೆ ಕಾಣುತ್ತಿದ್ದ ಈ ಮನುಶ್ಯನೇ
ಪ್ರಖ್ಯಾತ ಸಿನೆಮಟೊಗ್ರಾಫರ್ ಮೂರ್ತಿಯವರೇ?
ಭವಾನಿ ನನ್ನನ್ನು ಅವರಿಗೆ ಪರಿಚಯ
ಮಾಡಿಸಿದರು. ನಂತರ ಮಾತುಕತೆ ಶುರುವಾಯಿತು. ಅವರು ವರ್ಷಗಳಿಂದ
ಪರಿಚಿತರೇನೋ ಅನ್ನಿಸಿಬಿಟ್ಟಿತು. ಅಂಥಾ ಸಹಜ, ಸರಳ ಜೀವಿ. ಮುಂಬೈ
ಚಿತ್ರೋದ್ಯಮದಲ್ಲಿ ಇಂಥವರು ಇರುತ್ತಾರೆಯೇ? ಅವತ್ತು ಅವರು ಮಾಡಿಸಿದ್ದು
ಹಾಸ್ಯ ನಾಟಕ. ನಕ್ಕು ನಕ್ಕು ಸಾಕಾಗಿತ್ತು. ಅವರಿಗೆ ನಾಟಕದ ಹುಚ್ಚು ಎಷ್ಟಿತ್ತೆಂದರೆ
’ನೋಡಮ್ಮ ಉಮಾ, ಆಗೇನಾದರೂ ಯಾರಾದರೂ ಒಂದು ೧೦,೦೦೦ ರುಪಾಯಿ
ಸಂಬಳ ಕೊಡ್ತೀನಿ, ನಾಟಕ ಮಾಡಿಸಿಕೊಂಡಿ
           ರು ಅಂದಿದ್ರೆ, ಹಾಯಾಗಿದ್ದುಬಿಡ್ತಿದ್ದೆ’ಎಂದು
ಬಿಸಿಲು ಕೋಲು ಬರೆಯುತ್ತಿದ್ದಾಗ ಹೇಳಿದ್ದರು.

                 *               *             *


ನಂತರ ನಾವು ಹೊಸರೀತಿಯ ನಾಟಕಗಳನ್ನು
ಆದಿಸುತ್ತಿದ್ದ ಟಾಮ್ ಆಲ್ಟರ್, ಬೆಂಜಮಿನ್ ಗಿಲಾನಿ, ಅಮೋಲ್ ಪಾಲೆಕರ್,
ನಸೀರುದ್ದೀನ್ ಶಾ ಅವರುಗಳನ್ನು ನೋಡಲು ಯಾವಾಗ ದಾದರಿನ
ಛಬಿಲ್ ದಾಸ್ ಸ್ಕೂಲಿನ ಆಡಿಟೋರಿಯಮ್ ಗೆ ಹೋದರೂ, ಅಥವಾ
ಶಬಾನಾ ಆಜ್ಮಿ, ಸ್ಮಿತಾ ಪಾಟಿಲ್, ಸತ್ಯದೇವ್ ದುಬೇ ಮುಂತಾದವರ ನಾಟಕಗಳನ್ನು
ನೋಡಲು ಪೃಥ್ವಿ ಥಿಯೇಟರಿಗೆ ಹೋದರೂ ಅಲ್ಲಿ ಕುಟ್ಟಿ ಹಾಜರಿರುತ್ತಿದ್ದರು.
ಅದೇ ಬಿಳೀ ಪ್ಯಾಂಟು, ಬಿಳೀ ಶರಟು, ಕೈಯ್ಯಲಿ ಸಿಗರೇಟಿನ ನಗುಮುಖದ  ಮನುಷ್ಯ.

                   *               *              *

೯೦ರ ದಶಕದಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು. ನಾವು ಕೆಲವು ವರ್ಶಗಳ
ನಂತರ ಇಲ್ಲಿಗೆ ಬಂದೆವು. ಭೇಟಿಯಾದಾಗ ’ತುಂಬಾ ಖುಶಿಯಾಯ್ತು ನೀವು
ಬಂದದ್ದು. ಇಲ್ಲಿ
ಜನ ಸ್ವಲ್ಪ ರಿಸರ್ವ್ಡ್. ಮುಂಬೈನವರಂತಲ್ಲ’ ಎಂದು ನಕ್ಕರು.
ಏನೂ ಕೆಲಸ ಇಲ್ಲದೆ ಕೂಡೊದೂ ಬೇಜಾರು ಎಂದು ನೊಂದು ಕೊಂಡರು. ನಾನು
ನಾಣಿ, ಸಿಟಿ ಇನ್ಸ್ಟಿಟ್ಯುಟಿನಲ್ಲಿ ಜನನ್ನ ಸೇರಿಸಿ ನಾಟಕ ಮಾಡಬಹುದೂಂತ
ನೋಟೀಸ್ ಹಾಕಿದರೆ ಒಂದು ಹೆಸರೂ ಬರಬೇದವೇ?! ಜನಕ್ಕೆ ಉತ್ಸಾಹವೇ
ಇಲ್ಲ ಎಂದು ಆಶ್ಚರ್ಯ ಪಟ್ಟರು. ಕನ್ನಡ ಚಿತ್ರಗಳಿಂದಲೂ ಕರೆ ಬಂದಿಲ್ಲ
ಎಂದು ಅವರಿಗೆ ಸ್ವಲ್ಪ ಬೇಸರವಿದ್ದಂತಿತ್ತು.

                   *                *              *

ಒಂದು ಪತ್ರಿಕೆಯಲ್ಲಿ ಬಂದ ಅವರ ಸಂದರ್ಶನದಲ್ಲಿ ಮಾತನಾಡುತ್ತ
ಸಂದರ್ಶಕಿ ’ನೀವು ಇಷ್ಟೆಲ್ಲ ಸಾಧನೆ ಮಾಡಿದೀರಾ ಆದರೆ ನಿಮ್ಮ ಆತ್ಮ ಚರಿತ್ರೆ ಯಾಕೆ
ಬರೆದಿಲ್ಲ? ಇಟ್ ವಿಲ್ ಬಿ ಸೋ ಇನ್ಟರಸ್ಟಿಂಗ್!’ ಎಂದು ಕೇಳಿದಾಗ
’ಐ ಆಮ್ ನಾಟ್ ಅ ರೈಟರ್, ಐ ಕ್ಯನ್ ಓನ್ಲಿ ಮೇಕ್ ಫ಼ಿಲ್ಮ್ಸ್’ಎಂದಿದ್ದರು.
ಅಗ ನನ್ನ ಟ್ಯೂಬ್ ಲೈಟ್ ಆನ್ ಆಗಿತ್ತು. ಲೇಖಕಿಯಾಗಿ, ಅವರು ಅಷ್ಟು
ಚೆನ್ನಾಗಿ ಬಲ್ಲ ನಾನು ಏನು ಮಾದುತ್ತಿದ್ದೇನೆ? ಮಾರನೆಯ ದಿನವೇ ಅವರ ಮನೆಗೆ
ಹೋಗಿ ಕೇಳಿದ್ದೆ. ’ನಾನಂಥಾದ್ದು ಏನು ಸಾಧಿಸಿದ್ದೇನೆ ’ ಎಂದು ಸಂಕೋಚದಿಂದ
 ಮೊದಲು ಅನುಮಾನಿಸಿದ ಅವರು ನಂತರ ಒಪ್ಪಿದ್ದರು.
ಹಾಗೆ ಜನ್ಮ ತಾಳಿದ ’ಬಿಸಿಲುಕೋಲು ’ಮೂಲಕ ಈ ಅದ್ಭುತ ವ್ಯಕ್ತಿಯ ಬದುಕಿನ ನಿಕಟ
ಪರಿಚಯವಾಯಿತು. ಆ ಪುಟ್ಟ ಹುಡುಗನ ಕಡುಬಡತನ, ಯಾವಗಲೂ ಕಾಡುತ್ತಿದ್ದ ಹಸಿವು,
ಮೂಕಿ ಚಿತ್ರ ನೋದುತ್ತ ಮರೆಯುತ್ತಿದ್ದ ತಾಯಿಯಿಲ್ಲದ ಮನೆ, ಸಿನೆಮಾ ಹುಚ್ಚಿನಲ್ಲಿ
ಊರು ಬಿಟ್ಟು ಮುಂಬೈ ಗೆ ಓಡಿ ಹೋದವನ ಕೆಚ್ಚು, ನಂತರದ ಯಶಸ್ಸು, ಎ॒ಂದೂ ಬದಲಾಗದ
ಸಹಜ ಸರಳ ಸ್ವಭಾವ, ತಾವೇ ಮಾಡಿಕೊಡುತ್ತಿದ್ದ ಘಮ್ಮೆನ್ನುವ ಕಾಫಿ.॒.ಎಲ್ಲವೂ
ನನ್ನೊಳಗೆ ಅಳಿಸದಂತೆ ಹೊಕ್ಕಿತು.

                    *                *              *

ಅವರು ಚಿತ್ರರಂಗದಲ್ಲಿ ಸಾಧಿಸಿದ್ದು ಇತಿಹಾಸ. ಅಷ್ಟು ಕಡಿಮೆ ತಂತ್ರಜ್ನಾನ ಉಪಯೋಗಿಸಿ
ಅಂಥಾ ಅದ್ಭುತ ಫ಼್ರೇಮ್ಗಳನ್ನು ನಮ್ಮ ಮುಂದಿಟ್ಟ ಅವರ ಕೈಚಳಕಕ್ಕೆ ಜಗಲ್ಲೇ ಬೆರಗಾಗಿತ್ತು.
ಸಿನಿಮಾಟೊಗ್ರಫ಼ಿ ಕ್ಷೇತ್ರದಲ್ಲಿ ಮೂರ್ತಿಸಾಬ್ ಅಂಥಾ ಪರ್ಫ಼ೆಕ್ಶನಿಸ್ಟ ಇಲ್ಲ ಎಂದು ಪ್ರತೀತಿ.
ಅವರ ಶಿಶ್ಯರಲ್ಲೊಬ್ಬರಾದ ಶಿರೀಶ್ ದೇಸಾಯಿ ನೆನಪಿಸಿಕೊಳ್ಳುವ ಒಂದು ಘಟನೆ ಹೀಗಿದೆ.

’ಮೂರ್ತಿಸಾಬ್ ಬಾಯಲ್ಲಿ ಏನೂ ಹೇಳದೆಯೇ ಕ್ಯಾಮರಾಮನ್ ಗೆ ಕಲಿಯಬೆಕಾದ
ಎಲ್ಲವನ್ನೂ ಕಲಿಸಿದ್ದರು. ಮೂರ್ತಿಸಾಬ್ ಮತ್ತು ಶಮ್ಮಿ ಕಪೂರ್ ತುಂಬಾ ಅತ್ಮೀಯ ಗೆಳೆಯರು.
ಶಮ್ಮಿ ಕಪೂರ್ ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಒಂದು ಸಲ ಅವರೊಡನೆ ಶೂಟ್ ಮಾದು
ತ್ತಿದ್ದೆ. ಶಾಟ್ ನದುವೆ ಶಮ್ಮಿ ಕಪೂರ್ ಅ ಪಾತ್ರದ ’ಲುಕ್’ ತಪ್ಪು
ಎಂದು ಕಾಮೆಂಟ್ ಮಾಡಿದರು. ನಾನು ಸರಿ ಇದೆ ಎಂದೆ. ದೊಡ್ಡ ವಾಗ್ವಾದವೇ ಆಗಿ ಹೋಯಿತು.
ಆದರೆ ನಾನು ಬಿಟ್ಟುಕೊಡಲಿಲ್ಲ. ಕೊನೆಗೆ ಶಮ್ಮಿ ನಿನಗೆ ಟ್ರೇನಿಂಗ್ ಕೊಟ್ಟವರು ಯಾರು?
ಎಂದು ಜೋರಾಗಿ ಕೇಳಿದರು.  ನಾನೌ ವಿ.ಕೆ.ಮೂರ್ತಿಸಾಬ್’ಎಂದೆ. ಶಮ್ಮಿ ಕಪೂರ್
ನಗಲು ಶುರು ಮಾಡಿದರು.  ’ಅದಕ್ಕೆ ನಿನಗೆ ಇಂಥಾ ಆಟಿಟ್ಯೂಡ್ ಇದೆ, ಅಶ್ಚರ್ಯವೇನಿಲ್ಲ’
ಎಂದರು. ನಾವು ತೆಗೆದು ಕೊಂಡ ನಿಲುವು ಸರಿ ಎಂದು ನಮಗೆ ಖಾತ್ರಿಯಾಗಿದ್ದಲ್ಲಿ ಎಂದೂ
ಬಗ್ಗ ಬಾರದೆಂದು ಮೂರ್ತಿಸಾಬ್ ನಮಗೆ ಹೇಳಿಕೊಟ್ಟಿದ್ದರು.

                     *                  *                *

ಅವರು ತಮ್ಮ ಶಿಶ್ಯರಿಗೆ ಹೇಳಿದ್ದು ಯಾವಾಗಲೂ ಮನಸ್ಸಿನಲ್ಲಿ ಕಾಡುತ್ತಿರುತ್ತದೆ.
ಬೆಳಕನ್ನೂ ಒಬ್ಬ ನಟನೆಂದು ತಿಳಿಯಿರಿ. ಇದು ರಾತ್ರಿಯೇ, ಬೆಳಗ್ಗೇ  ಎಣ್ದು ಬೆಳಕು
ಹೇಳುತ್ತದೆ. ಇಲ್ಲಿ ಭಯ ಸುತ್ತುವರಿದಿದೆಯೇ, ಪ್ರೇಮ ಸಲ್ಲಾಪದ ಪರಿಸರವಿದೆಯೇ,
ದುಃಖದ ಚಾಯೆ ಇದೆಯೇ ಎಂದು ಸುತ್ತಲಿನ ಬೆಳಕು ಹೇಳುತ್ತದೆ. ನೀವು ಬೇಳಕನ್ನು ಒಬ್ಬ
ನಟ ಎಂದುಕೊಂಡರೆ ಸರಿಯಾದ ಮೂಡ್ ಸೃಷ್ಟಿಸಲು ಸಾಧ್ಯವಾಗುತ್ತದೆ.


                       *                     *              *

(ಪ್ರಜಾವಾಣಿ ೮/೪/೧೪)